ಭಾನುವಾರ, ನವೆಂಬರ್ 13, 2011

ಅರ್ಪಣೆ ಮತ್ತು ಅಭಿಮಾನದ ಪ್ರಶ್ನೆ

ಈ ಕಾಲ ಮಾಧ್ಯಮಗಳ ಕಾಲ, ಈ ಕಾಲದ ಚಿಂತನೆ ಮಾಧ್ಯಮವೇ ರೂಪಿಸುತ್ತಿರುವ ಚಿಂತನೆ. ಬಹುಕೋಟಿ ಜನರಿರುವ ನಮ್ಮ ನಾಡಿನ ಆತ್ಮದ ಒಟ್ಟು ಚಿತ್ರಣವನ್ನು ಬೆರಳೆಣಿಕೆಯ ಕೆಲವು ಮಿತ್ರರು ತಮಗೆ ಬೇಕಾದಂತೆ ಕಟ್ಟುತ್ತಿದ್ದಾರೆ. ಈ ರೀತಿಯ ಚಿತ್ರವೇ ಪರಿಪೂರ್ಣ ಎಂಬಂತೆ ಸಮಷ್ಠಿ ಪ್ರಭಾವ ಮೂಡಿಸುತ್ತಿದ್ದಾರೆ. ಇದು ವರ್ತಮಾನದ ದುರಂತ ಮಾತ್ರವಲ್ಲ ಭೋಗದ ವಾರಸುದಾರರ ವಿಜೃಂಭಣೆಯ ವಿಷಮ ಸ್ಥಿತಿ. ತಮ್ಮದೇ ನಿರ್ಧಾರಿತ ಮೌಲ್ಯಗಳನ್ನಾಧರಿಸಿ ಶ್ರೇಷ್ಠ ಮತ್ತು ಕನಿಷ್ಟವೆಂಬ ವ್ಯಸನವನ್ನು ಹುಟ್ಟು ಹಾಕುತ್ತಾ ಕಾಲದ ವಾಸ್ತವ ತಲ್ಲಣಗಳಾಚೆ ಆರೋಗ್ಯಕರ ದೃಷ್ಟಿಕೊನವನ್ನು ಹಾದಿತಪ್ಪಿಸುವ ಹುನ್ನಾರ ಈ ಮಿತ್ರರ ಅಭಿವ್ಯಕ್ತಿಯ ಹಿಂದಿದೆ ಎಂಬುದು ತಿಳಿಯಲಾರದ್ದೇನಲ್ಲ. ಎಲ್ಲವನ್ನೂ ರಂಜನೀಯಗೊಳಿಸುತ್ತ ಪರಂಪರೆ ಪಿಡುಗುಗಳಿಗೆ ಹೊಸದೊಂದು ರೂಪಕೊಟ್ಟು ಬಹುಜನರಿಗೆ ಇಷ್ಟವಾಗುವ ಧಾಟಿಯಲ್ಲಿ ಹೇಳುವ, ಹಿಂದೆಂದಿಗೂ ಇಲ್ಲದಂತಿರುವ ಕೌಶಲಗಳನ್ನು ತಾವೇ ಸೃಜಿಸಿದ ಸೃಷ್ಟಿಕರ್ತರೆಂದು ಬೀಗುತ್ತಾ, ಆ ಕೌಶಲಗಳನ್ನು ತಮ್ಮ ತಮ್ಮದೇ ಪಟಾಲಂಗೆ ಧಾರೆ ಎರೆಯುತ್ತಾ ಒಂದಿಲ್ಲವಾದರೆ ಇನ್ನೊಂದು ಅದು ಇಲ್ಲವಾದರೆ ತಮ್ಮದೇ ಒಂದು ಸಂಸ್ಥಾಪನೆ ಮಾಡಿಕೊಳ್ಳುತ್ತಾ ನಡೆಯುತ್ತಿರುವ ರೀತಿಯನ್ನು ಮುಗುಮ್ಮಾಗಿ ಗಮನಿಸುತ್ತಿರುವ ಶ್ರೀಸಾಮಾನ್ಯನಿಗೆ ಬಾಯಿ ಇಲ್ಲವೆನ್ನಲಾಗುತ್ತಿದೆ. ಈ ಶ್ರೀಸಾಮಾನ್ಯನ ಯಾವುದೇ ಪ್ರತಿರೋಧಕ್ಕೂ ಮೌಲ್ಯವಿಲ್ಲ ಅಥವಾ ಮೌಲ್ಯವನ್ನು ಸಾಬೀತು ಪಡಿಸುವ ಅವಕಾಶವಿಲ್ಲ.


ತಾನು ಎನ್ನುವುದನ್ನು ಉತ್ಪ್ರೇಕ್ಷಯ ಆತ್ಯಂತಿಕ ಸ್ಥಿತಿಯಲ್ಲಿ ಕಲ್ಪಿಸಿಕೊಂಡು ಅದನ್ನು ಸಾಧಿಸುವ ಹೀನತೆಗೆ ಯಾವ ದಾರಿಯಾದರೂ ಸರಿ ಎನ್ನುವ ಮನಸ್ಥಿತಿಯೇ ಏನು ಬರೆದರೂ ನಡೆದೀತು ಎನ್ನುವ ಅಹಮ್ಮಿಕೆಯನ್ನು ಕೆಲವರಲ್ಲಿ ಹುಟ್ಟಿಸಿದೆ. ಈ ಕೆಲವರು ಕರ್ನಾಟಕದ ಪ್ರಸಕ್ತ ವರ್ತಮಾನಕ್ಕೆ ಮಾಡಿರುವ ಆಘಾತ ತುಂಬಾ ಪರಿಣಾಮಕಾರಿಯಾದುದೆ. ಯಾವುದೇ ಇದ್ದರೂ ಅದನ್ನು ತಮ್ಮ ಸ್ವ ಕೇಂದ್ರಿತ ನೆಲೆಯಲ್ಲಿ ವಿಶ್ಲೇಶಿಸಿ ಅಂತಿಮ ತಿರ್ಪು ಎಂಬಂತೆ ವರ್ತಿಸುವ ಇಂಥವರಿಗೆ ನಾಡಿನ ಸಮಸ್ಥ ಜನರ ಬದುಕನ್ನು ಕಟ್ಟಿದವರು ನಾರಾಯಣಮೂರ್ತಿ, ದೇಶವನ್ನು ಸಮೃದ್ಧಗೊಳಿಸಿದವರು ಟಾಟಾ, ಬಿರ್ಲಾ, ಮಿತ್ತಲ್, ಅಂಬಾನಿಯಾದರೆ ಆಶ್ಚರ್ಯವಿಲ್ಲ. ಶ್ರೇಷ್ಠತೆಯ ವಾಸಿಯಾಗದ ವ್ಯಸನವನ್ನು ತಮ್ಮಲ್ಲಿ ಹುಟ್ಟಿಸಿಕೊಂಡು, ಈ ಕಾಯಿಲೆಯನ್ನು ಅಮಾಯಕರಿಗೂ ಅಂಟಿಸಿ ವಿಕೃತ ಭೋಗದ ಸುಖ ಅನುಭವಿಸುತ್ತಿರುವ ಈ ಹೊತ್ತಿನ ಇಂಥ ಮನಸ್ಥಿತಿಗಳಿಗೆ ಮಾತ್ರ ಸಾಹಿತ್ಯ ಒಂದು ವರ್ಗ, ಸಾಹಿತಿ ಒಂದು ಹುದ್ದೆ. ಸಮಷ್ಠಿ ಬದುಕಿನ ತಿರುಳಾದ ಹಳ್ಳಿಯ ಹಳ್ಳಿಗನಿಗೂ ಮಾತಿನ ಒಂದು ಧಾಟಿ ಗೊತ್ತು, ತನ್ನ ಆಂತರ್ಯವನ್ನು ಮತ್ತೊಬ್ಬರ ಅಂತರಾಳಕ್ಕೆ ಮುಟ್ಟಿಸುವ ದಾರಿ ಗೊತ್ತು. ಅದು ಎಂದೂ ಉಡಾಫೆಯದಾಗಿರಲಾರದು. ತಾನೆ ಎನ್ನುವ ಅಹಮ್ಮಿಕೆಯಿಂದ ಕೂಡಿರಲಾರದು. ಸ್ವರತಿಯುಳ್ಳ ಮನಸ್ಸಿಗೆ ಮಾತ್ರ ಸಾಹಿತಿ ಎನ್ನುವುದು ಒಂದು ಅಧಿಕಾರವಾಗಿ ಸೀಮಾತೀತ ಕಲ್ಪನೆಯಾಗಿ ಕಾಣುತ್ತದೆ. ಹಾಗೆ ನಿರ್ಣಯಿಸಿದ ಕಾರಣದಿಂದಲೇ ಓಬೆರಾಯ ಎನ್ನುವ ಪದವಾಗಲಿ ನಾಲ್ಕು ಕವಿತೆ ಆರು ಕಥೆ ಎರಡು ಪ್ರಭಂಧ ಎನ್ನುವ ಅಂಕಿ ಅಂಶವಾಗಲಿ ಮಾನದಂಡವಾಗುತ್ತದೆ. ಈ ರೀತಿಯ ಅಭಿಪ್ರಾಯದ ಹಿಂದಿರುವುದು ಅದೆಂಥ ತಿರಸ್ಕಾರದ ಹಮ್ಮು ಎಂಬುದನ್ನು ಮರೆಮಾಚಲಾಗದು. ನಿಜವಾಗಿಯೂ ಸಾಹಿತ್ಯ ಎನ್ನುವುದು ಒಂದು ವರ್ಗವೆ ? ಸಾಹಿತಿ ಎನ್ನುವುದು ಒಂದು ಹುದ್ದೆಯೇ ? ಈ ರೀತಿಯ ಪರಿಕಲ್ಪನೆಯನ್ನು ವರ್ತಮಾನದ ಒಟ್ಟು ಬದುಕಿನಲ್ಲಿಟ್ಟು ನೋಡಲು ಸಾಧ್ಯವೆ ? ಕಾಲ ಸಂದರ್ಭದ ನಿರ್ಣಾಯಕ ಪಾತ್ರವನ್ನು ವಹಿಸಿದ ಮಹನೀಯರನ್ನ ಸಾಹಿತಿ ಎಂದು ಮಾತ್ರ ಪರಿಗಣಿಸಲು ಸಾಧ್ಯವೇ ? ಅವರೊಳಗಿನ ಶ್ರೀಸಾಮನ್ಯತೆಯನ್ನ ನೀರಾಕರಿಸಲಾದಿತೇ ? ಹಾಗಾದರೆ ಈ ಪರಿಕಲ್ಪನೆಯಲ್ಲಿಯೇ ಮಾತನಾಡುವವರ ಕುರಿತು ಅವರ ಚರ್ವಿತ ಚರ್ವಣಗಳ ಜಾಲಾಡಿಸಿ ನೋಡುವ ಶ್ರಮವೇ ಬೇಕಿಲ್ಲ ಎನಿಸುತ್ತದೆ. ಯಾವುದೇ ಮನುಷ್ಯನ ಅಭಿವ್ಯಕ್ತಿಗೆ ಆಯಾ ಕಾಲಘಟ್ಟದ ಮೌಲ್ಯ, ಆ ಮನುಷ್ಯನ ಇರುವಿನ ಆಚೆಗೂ ಅವನು ಕಟ್ಟಿಕೊಟ್ಟ ಅಭಿವ್ಯಕ್ತಿಗೆ ದಕ್ಕುವ ಸಾರ್ಥ್ಯಕ್ಯವನ್ನು ಮನಗಾನಲು ಬಾರದವರು ಮಾತ್ರ ಇಂಥದೊಂದು ಉಡಾಫೆಯನ್ನು ಹಂಚಿಕೊಳ್ಳುತ್ತಾರೆ. ಮೂಲತಃ ಯಾವುದೇ ಬರಹದ ಸೃಷ್ಟಿಯ ಮೂಲ ಮನುಷ್ಯ ಸಹಜತೆ. ಈ ಮನುಷ್ಯ ಸಹಜತೆಯ ಅರಿವಿಲ್ಲದವ ಕಾಲದ ಪ್ರವಾಹದಲ್ಲಿ ಉಳಿಯಬಲ್ಲಂಥಹುದನ್ನಾವುದೂ ಕೊಡಲಾರ, ತಾನೂ ಉಳಿಯಲಾರ.

ಕನ್ನಡ ಬದುಕು ಕೇವಲ ಉದ್ಯೋಗದ ಮೂಲವಲ್ಲ. ಇನ್ನೂ ಮುಂದುವರೆದು ಹೇಳುವುದಾದರೆ ಸಾಪ್ಟವೇರ್ ಉದ್ಯೋಗದ ಮೂಲವಲ್ಲ. ಸಾವಿರ ಜನರನ್ನು ತನ್ನ ನೂರಾರು ಎಕರೆ ಜಮೀನಿನಲ್ಲಿ ತಿಂಗಳಿಗೆ ಇಂತಿಷ್ಟು ಕೂಲಿ ಮಾತಾಡಿ ಜೀವನಪೂರ್ತಿ ದುಡಿಸಿಕೊಳ್ಳುವ, ಆ ದುಡಿಯುವವರ ದುಡಿಮೆಯಲ್ಲಿ ಎತ್ತರೆತ್ತರ ಏರುವ ಜಮೀನುದಾರ ತನ್ನ ಸಂಪತ್ತಿನ ಸಮೃದ್ಧಿಗೆ ಉದ್ಯೋಗ ಕೊಟ್ಟಿರುತ್ತಾನೆಯೇ ಹೊರತು ತನಗಾಗಿ ದುಡಿಯುವವರ ಬದುಕನ್ನು ಸಲಹುವುದಕ್ಕಾಗಿ ಅಲ್ಲ. ಪ್ರಪಂಚದಾದ್ಯಂತ ಹಂಚಿ ಹೋಗಿರುವ ಅದೆಷ್ಟು ಸಾಪ್ಟವೇರ ಜನರಿಗೆ, ಬೇರೆ ಬೇರೆ ಉದ್ಯೋಗದಲ್ಲಿರುವವರಿಗೆ ಎಷ್ಟು ದೇಶದ ಎಷ್ಟು ಉದ್ಯಮಿಗಳು ಉದ್ಯೋಗ ನೀಡಿದ್ದಾರೆ. ಹಾಗಾದರೆ ಅವರೆಲ್ಲರಿಗೂ ಕನ್ನಡಿಗರ ಬದುಕನ್ನು ಕಟ್ಟಿಕೊಟ್ಟವರೆಂಬ ಗುಣವಿಶೇಷಣ ಬಳಸಬಹುದಾದರೆ ನಮ್ಮ ಕನ್ನಡದ ಆಸ್ಮಿತೆಯ ದ್ಯೋತಕವಾದ ಪ್ರತಿಯೋಂದು ಚಟುವಟಿಕೆಗೂ ಕ್ರೀಯೆಗೂ ಅವರ ಅಮೃತ ಹಸ್ತವನ್ನೆ ಬಳಸೊಣವೇ ? ಕೇವಲ ಸಾಪ್ಟವೇರ ಮಾತ್ರವಲ್ಲ ಹೊಟ್ಟೆ ಹೊರೆಯುವಿಕೆಯೇ ಪ್ರಧಾನವಾಗಿರುವ ಸ್ವ ಕೇಂದ್ರಿತ ಸಂಪತ್ತನ್ನು ವೃದ್ಧಿಸುವುದೇ ಗುರಿಯಾಗಿರುವ ಅಲ್ಲದೇ ಈ ಕಾಲದಲ್ಲಿ ಡಾಮಿನಂಟಾಗಿ ಉಳಿಯಬಹುದಾದ ಅವಕಾಶವನ್ನು ಒದಗಿಸಿರುವ ಉದ್ಯೋಗಿಗಳ ಉದ್ಯೋಗದಾತರಿಗೆ ಕರ್ನಾಟಕದ ಅಲ್ಲೇ ಕುಂತಿರುವ ಎಲ್ಲರೂ ಎದ್ದು ಬಂದು ಆ ಮಹಾವ್ಯಕ್ತಿಗಳು ಬರಲಿಲ್ಲವಾದರೆ ಅವರಿಗೆ ಅಂಗಲಾಚಿ ಬೇಡಿಕೊಂಡು ಅವರಿಗೆ ಜೈಘೋಷ ಹಾಕುತ್ತಾ ಮೇರವಣಿಗೆ ಮೂಲಕ ಕರೆತರೋಣವೆ ?

ಅರ್ಪಣೆ ಮತ್ತು ಅಭಿಮಾನವನ್ನು ಕೆಲವು ಜನ ಪರಂಪರೆಯಿಂದ ವರ್ತಮಾನದಿಂದ ಅರ್ಥಮಾಡಿಕೊಳ್ಳಲೆ ಇಲ್ಲ. ಹಾಗೆನ್ನುವದಕ್ಕಿಂತ ಅವುಗಳ ಗೊಡವೆಯೇ ಬೇಡದವರಿಗೆ ಏನು ಹೇಳುವುದು. ಬದುಕನ್ನು ನಾಡು ನುಡಿಗಾಗಿ ಅರ್ಪಿಸಿಕೊಳ್ಳುವುದನ್ನು ಬಿಟ್ಟು ಕನ್ನಡದ ಮಾಹಾನ್ ಚೇತನಗಳೆಲ್ಲರೂ ಒಂದೊಂದು ಇನ್ಪೊಸಿಸ್ ಕಟ್ಟಿ ಲಕ್ಷಾಂತರ ಕೋಟಿ ಸಂಪಾದಿಸಿ ಸಾವಿರಾರು ಜನರನ್ನು ಉದ್ಯೋಗಿಗಳಾನ್ನಾಗಿ ಮಾಡಿಕೊಂಡು ನೂರಾರು ಕೋಟಿ ತೆರಿಗೆ ವಂಚಿಸಿ ಕನ್ನಡ ಭಾಷೆಯ ಅಸ್ತಿತ್ವಕ್ಕೋಂದು ಸಾಪ್ಟವೇರ ಅಭಿವೃದ್ಧಿ ಮಾಡದೇ ಹೋದರೂ ಪರವಾಗಿಲ್ಲ ಭೋಗ ಜಗತ್ತಿನ ವಾರಸುದಾರರಾಗಿ ಬೀಗ ಬೇಕಿತ್ತೇ ? ಓಬೆರಾಯನ ಕಾಲದ ಸಾಹಿತಿಗಳೆಂದರೆ ಯಾರು ? ಸಿದ್ದಲಿಂಗ ಪಟ್ಟಣಶೆಟ್ಟಿ, ಜಿಎಸ್.ಎಸ್., ಜಿ. ವೆಂಕಟಸುಬ್ಬಯ್ಯ, ಜಂಬಣ್ಣ ಅಮರಚಿಂತ, ಅಲ್ಲಮಪ್ರಭು ಬೆಟ್ಟದೂರ ಅಥವಾ ಚಂದ್ರಕಾಂತ ಕುಸನೂರರೇ ? ಅಥವಾ ಜೋಗಿಯವರೆ ಹೇಳಿಕೊಂಡಿರುವ ನಾ. ಮೊಗಸಾಲೆಯವರೆ ? ಹಾಗಾದರೇ ತಾವು ಯಾವ ಕಾಲದವರು ಮತ್ತು ತಮ್ಮ ಸಾಹಿತ್ಯ ಎಷ್ಟು ಲೇಟೆಸ್ಟ ಎನ್ನುವುದನ್ನು ಕೇಳಲು ನಾವು ಯಾರು ಅಲ್ಲವೇ ?

ಖಂಡಿತವಾಗಿಯೂ ಇಂದು ನಡೆಯುತ್ತಿರುವ ನಡೆಸುತ್ತಿರುವ ಎಲ್ಲ ಚರ್ಚೆಗಳೂ ಒಂದು ಆತ್ಮಾಭಿಮಾನದ ಕಾರ್ಯಕ್ರಮವನ್ನ ಭಾಷೆಕೇಂದ್ರಿತವೋ ಪ್ರತಿಷ್ಠೆಯ ಪ್ರಶ್ನೆಯಾಗಿಯೋ ಪರಿಗಣಿಸಿರುವ ಕಾರಣದಿಂದಾಗಿಯೇ ಹೀಗೆಲ್ಲವೂ ನಡೆಯುತ್ತಿದೆ. ಅರ್ಪಣೆಗೆ ಅರ್ಥವಿಲ್ಲ ಅಭಿಮಾನಕ್ಕೆ ಮರ್ಯಾದೆ ಇಲ್ಲ ಕನ್ನಡಿಗನ ಬದುಕನ್ನು ಕೇಂದ್ರವಾಗಿಟ್ಟುಕೊಂಡು ಆ ಬದುಕಿನ ಸಂಕಷ್ಟಗಳನ್ನು ಕೇಂದ್ರವಾಗಿಟ್ಟುಕೊಂಡು ಆ ಸಂಕಷ್ಟದ ರೂಕ್ಷತೆಯ ದೂರ ಮಾಡುವಿಕೆಯನ್ನಿಟ್ಟುಕೊಂಡು, ಕೊಡುಕೊಳ್ಳುವ, ಚರ್ಚಿಸುವ ಕ್ರಿಯೆಗಿಳಿಯುವ ಯಾವುದೂ ಸಹ ಇದನ್ನು ಆಯೋಜಿಸಿರುವ ವ್ಯವಸ್ಥೆಗೂ ಬೇಕಿಲ್ಲ, ಇದನ್ನು ಪ್ರತಿಷ್ಟೆಯ ಸಂಭ್ರಮಕೂಟವಾಗಿ ಭಾವಿಸಿ ಇದರ ಅರ್ಥವಂತಿಕೆಯನ್ನು ಪ್ರಶ್ನಿಸುವವರನ್ನಷ್ಟೇ ಅಲ್ಲದೆ ಇಡೀ ಅಭಿವ್ಯಕ್ತಿಯ ಪರಂಪರೆ ಮತ್ತು ವರ್ತಮಾನವನ್ನು ಅಲ್ಲಗಳೆಯುವ, ಉಡಾಫೆಯಿಂದ ನೋಡುವವರಿಂದ ಏನನ್ನು ನಿರೀಕ್ಷಿಸಲಾದೀತು ?

ವಿಶ್ವ ಕನ್ನಡ ಪ್ರತಿಷ್ಠೆಗೆ ಜೈ

ನಾರಾಯಣಮೂರ್ತಿ ಜೊತೆ ನಮ್ಮ ಕೈ

ಎನ್ನೋಣವೇ ? ಸಕ್ಕರೆ ನಾಡಿನ ಬೆಲ್ಲ ಬೆಳೆಯುವ ಮನುಷ್ಯ ಕೈಗೆ ಬಂದ ತುತ್ತು ಬಾಯಿಗೆ ಬರಲಾರದ್ದಕ್ಕೆ ಬಳಲುತ್ತಿದ್ದಾನೆ, ಅದೆಲ್ಲ ಯಾರಿಗೆ ಬೇಕು ಬಿಡಿ.



ವೀರಣ್ಣ ಮಡಿವಾಳರ





1 ಕಾಮೆಂಟ್‌:

  1. ಪ್ರೀತಿಯ ವೀರಣ್ಣ. ಮೊದಲಿಗೆ ನಿಮಗೆ ಪ್ರಶಸ್ತಿಗಳು ಬಂದದಕ್ಕೆ ಅಭಿನಂದನೆಗಳು. ನಾನು ನಿಮ್ಮ ಹಲವು ಕವನಗಳನ್ನೂ, ಶೈನಾದಲ್ಲಿ ಬಂದ ವಿಮರ್ಶೆಯನ್ನು ಓದಿದ್ದೆ. ಒಟ್ಟಿನಲ್ಲಿ ಎಲ್ಲಾದರು ಓದುತ್ತಿರುತ್ತೇನೆ...ನಿಮ್ಮ ಪ್ರತಿಭೆಯ ಬಗ್ಗೆ ಮೂಕವಿಸ್ಮಿತನಾಗಿದ್ದೇನೆ. ಅದು ಬಿಡಿ. ಈ ಲೇಖನ ಯಾವ ಲೇಖನಕ್ಕೋ ಬರೆದ ಪ್ರತಿಕ್ರಿಯೆಯಂತಿದೆ. ಯಾವುದು? ಹೇಳಿ ಬಿಡಿ. ನನ್ನ ಬ್ಲಾಗ್ www.nallanalle.blogspot.com

    ಪ್ರತ್ಯುತ್ತರಅಳಿಸಿ