ಗುರುವಾರ, ಜನವರಿ 19, 2012

ದಲಾಲ

ರಾಜಸ್ತಾನಿ ಮೂಲ : ರಾಮ ಸ್ವರೂಪ ಕಿಸಾನ್

ಇಂಗ್ಲೀಷ್ ರೂಪಾಂತರ : ಶ್ಯಾಮ್ ಮಾಥೂರ್
ಕನ್ನಡಕ್ಕೆ : ವಿಠಲ ದು. ದಳವಾಯಿ.


ದನಗಳ ವ್ಯಾಪಾರದ ದಲಾಲಿಯಲ್ಲಿ ನನ್ನದು ದೊಡ್ಡ ಹೆಸರು. ದನಗಳನ್ನು ಕೊಳ್ಳುವವರಿಗೆ ಮತ್ತು ಮಾರುವವರಿಗೆ ಮಧ್ಯವತರ್ಿಯಾಗಿ ನಾನು ವ್ಯವಹಾರ ಕುದುರಿಸುತ್ತೇನೆ. ಅದಕ್ಕೆ ತಕ್ಕಂತೆ ನನ್ನ ಆಮದನಿಯೂ ಚೆನ್ನಾಗಿದೆ. ಸಂತೆಗೆ ಹೋದೊಡನೆ ಜನ ನನ್ನನ್ನು ಚಹಾದಂಗಡಿಗೆ ಕರೆದೊಯ್ಯುತ್ತಾರೆ. ಅಂಗಡಿಯವನು ನನ್ನೆಡೆಗೆ ಅರ್ಥಪೂರ್ಣವಾಗಿ ನೋಡಿ ಕಣ್ಣು ಮಿಟುಕಿಸಿ ಕೇಳುತ್ತಾನೆ, ವ್ಯಾಪಾರ ಜೋರೇನ್ರೀ ಸಾಹುಕಾರ? ನಾನು ಅವನಿಗೆ ತುಂಬ ಕ್ಲೋಜು ಎಂದು ಮಂದಿಯೆದುರು ತೊರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಕೆಲವೊಮ್ಮೆ ಇಂಥವರಿಂದ ಮಾರಿ ತಪ್ಪಿಸಿಕೊಳ್ಳುವುದೆ ಹರಸಾಹಸವಾಗುತ್ತದೆ.

ನಾನು ಸಂತೆಯಿಂದ ಸಂತೆಗೆ, ಜಾತ್ರೆಯಿಂದ ಜಾತ್ರೆಗೆ ಅಲೆಯುತ್ತಲೆ ಇರುತ್ತೇನೆ. ಇಲ್ಲಿಯೇ ನನ್ನ ದಿನದ ರೊಟ್ಟಿ ದುಡಿಯುತ್ತೇನೆ. ವರ್ಷಪೂತರ್ಿ ಎಲ್ಲಾದರೂ ಜಾತ್ರೆಗಳು ಇದ್ದೇ ಇರುತ್ತವೆ. ನನ್ನ ಹತ್ತಿರ ಥರಹೇವಾರಿ ಸುಳ್ಳುಗಳ ದೊಡ್ಡ ದಾಸ್ತಾನೇ ಇದೆ. ರಾತ್ರಿ ಕಂಡ ಬಾವಿಗೆ ನಾನು ಜನರನ್ನು ಹಗಲೇ ಬೀಳಿಸುತ್ತೇನೆ. ತೀರಾ ಯಾತಕ್ಕೂ ಬಾರದ ದನವನ್ನು ಗಬ್ಬಾದ ಮಣಕಿನ ಹಾಗೆ ಮಾರಿಸಬಲ್ಲೆ ಅಥವಾ ಮೈ ಕೈ ತುಂಬಿ ಗಡಿಗೆ ತುಂಬ ಹಾಲು ಹಿಂಡುವ ಎಮ್ಮೆಯಲ್ಲಿ ಎನಾದರೂ ಊನ ಕಂಡು ಹಿಡಿದು ಶಾಶ್ವತ ಕೊಟ್ಟಿಗೆಯಲ್ಲೇ ಕಟ್ಟಿ ಹಾಕಿಸಬಲ್ಲೆ. ಒಂದೇ ಮಾತಿನಲ್ಲಿ ಹೇಳುವುದಾದರೆ ನಾನು ಈ ವಿಷಯದಲ್ಲಿ ನುರಿತ ಜಾದುಗಾರನಂತೆ ಕ್ಷಣಾರ್ಧದಲ್ಲಿ ಕಲ್ಲನ್ನು ರತ್ನವಾಗಿ ಅಥವಾ ರತ್ನವನ್ನು ಕಲ್ಲಾಗಿ ಬದಲಾಯಿಸಬಲ್ಲೆ. ನನ್ನದೆಂತಹ ತಂತ್ರವೆಂದರೆ ಕೊಳ್ಳುವವ ಎದುರಿಗೆ ಬಿದ್ದ ಕಬ್ಬಿಣವನ್ನೂ ಬಂಗಾರವೇಂದೇ ತಿಳಿಯುತ್ತಾನೆ. ಹಾಗಂತ ನಾನು ಕೊಳ್ಳುವವನಿಗಷ್ಟೇ ಟೋಪಿ ಹಾಕುವುದಿಲ್ಲ, ಮಾರುವವನ ಕಿವಿಯ ಮೇಲೂ ದಾಸವಾಳ ಗಿಡವನ್ನೇ ನೆಡುತ್ತೇನೆ. ಕೆಲವು ಚಾಲಾಕಿ ಮಾಲಕರು ಕಣ್ಣು ಬಾಯಿಗಳೆರಡನ್ನೂ ತೆರೆದು ಗಿರಾಕಿ ಹುಡುಕುತ್ತಿರುತ್ತಾರೆ. ನಂಗೆ ಕ್ಯಾರೆ ಅನ್ನುವುದಿಲ್ಲ. ಅಂಥವರಿಗೆ ಅಮವಾಸ್ಯೆಯ ಚಂದ್ರನಂತೆ ಗಿರಾಕಿಗಳು ಮಂಗಮಾಯ ಆಗುವ ಹಾಗೆ ನನ್ನ ಕೈ ಚಳಕ ತೋರಿಸುತ್ತೇನೆ. ಇದರಿಂದ ಸುಸ್ತೆದ್ದು ಹೋಗುವ ಜನ ಎಲ್ಲಾ ನಿಂದೇ ತಂದೆ ಎನ್ನುತ ಕುಂಬಳಕಾಯಿ ಕುಡುಗೋಲು ನನ್ನ ಕೈಯಲ್ಲೇ ಕೊಟ್ಟು ನಿಟ್ಟುಸಿರು ಹಾಕುತ್ತಾರೆ. ಆನರನ್ನು ಹೇಗೆ ಮರಳು ಮಾಡಬೇಕೆಂಬುದು ನಂಗೆ ಗೊತ್ತು. ಇಷ್ಟಕ್ಕೂ ನಾನ್ಯಾರು? ಯಕಶ್ಚಿತ್ ಒಬ್ಬ ದಲಾಲ; ಹೆಸರು ತನಸುಖ್!

ನಂಗೊತ್ತು: ನನ್ನದಿದು ಪುಣ್ಯದ ಕೆಲಸವಲ್ಲ. ಮೂರೂ ಹೊತ್ತು ಮುಗ್ಧರನ್ನು ಮೋಸ ಮಾಡುವುದು ಪುಣ್ಯದ ಕೆಲಸ ಹೇಗಾಗುತ್ತದೆ? ಸುಳ್ಳು ಪಾಪದ ಒಂದು ಸಣ್ಣ ರೂಪವಷ್ಟೇ. ನಾನು ಬದುಕಲು ಗೊತ್ತಿರುವ ದಾರಿ ಇದೊಂದೇ. ನನಗೆ ಹೊಲ ಆಸ್ತಿ ಪಾಸ್ತಿ ಎನೂ ಇಲ್ಲ. ನನ್ನ ಉಸಿರು ಕಮಿಷನ್ ಮೇಲೆಯೆ ನಿಂತಿದೆ. ದಲಾಲ ಎನ್ನುವುದು ಒಂದು ಹೇವರಿಕೆ ಹುಟ್ಟಿಸುವ ಶಬ್ಧ. ಇದಕ್ಕೆ ಸಮಾಜದಲ್ಲಿ ಯಾವ ಕಿಮ್ಮತ್ತೂ ಇಲ್ಲ. ನಂಗಿದು ತಿಳಿದಿದೆ. ಆದರೆ ನಾನು ಅಸಹಾಯಕ. ಇಲ್ಲಿ ನಿಮ್ಮ ಮುಂದೆ ನನ್ನ ಜಾಣತನದ ಬಗ್ಗೆ ಕೊಚ್ಚಿಕೊಳ್ಳುತ್ತಿಲ್ಲ. ಬದಲಿಗೆ ನನ್ನ ವಂಚನೆಯ ಕ್ರೂರ ಕೌಶಲವನ್ನು ಪರಿಚಯಿಸಿದೆ.

ಒಂದು ಗೋಧೂಳಿಯ ಸಂಜೆ ಈ ಘಟನೆ ನಡೆಯಿತು. ನಾನು ಅದೆ ತಾನೆ ಮನೆಗೆ ಬಂದು ಅಂಗಳದಲ್ಲಿದ್ದ ಹೊರಸಿನ ಮೇಲೆ ಹೊರಳಾಡುತ್ತಿದ್ದೆ. ಜಂತಿಯಲ್ಲಿ ಗುಬ್ಬಿಗಳು ಕಚಿಪಿಚಿ ಗದ್ದಲವೆಬ್ಬಿಸಿದ್ದುವು. ಜಂತಿಯೆಲ್ಲ ಇಲ್ಲಣ (ಹೊಗೆಯ ಮಸಿ) ಹತ್ತಿ ಗುಬ್ಬಿಗಳ ಹಾವಳಿಯಿಂದ ಮಣ್ಣೆಲ್ಲ ಉದುರುತ್ತಿದೆ. ನನ್ನ ಹೃದಯದ ಬಣ್ಣವೂ ಇದೇ ಅಲ್ಲವೇ; ನನ್ನೊಳಗೆ ಸವಾಲುಗಳೇಳುತ್ತಿವೆ. ಶಿಥಿಲವಾಗುತ್ತಿರುವ ಚಾವಣಿ ತನ್ನ ದಶಕಗಳ ಇತಿಹಾಸವನ್ನು ಸಾರಿ ಹೇಳುತ್ತಿದೆ. ಹಕ್ಕಿಗಳಿಂದಾದ ತೂತುಗಳು ನನ್ನ ಜೀವನದ ಖಾಲಿತನವನ್ನು ಕಿಲಕಿಲಿಸುತ್ತಿವೆ. ನಾನು ಎಷ್ಟು ಸುಳ್ಳುಗಳನ್ನು ಹೇಳಿದೆ, ಎಷ್ಟೊಂದು ಪಾಪ ಮಾಡಿದೆ. ರೋಗಿಷ್ಟ ದನಗಳನ್ನು ದುಬಾರಿ ರೇಟಿಗೆ ಮಾರಿದೆ, ಎಷ್ಟೊಳ್ಳೆ ದನಗಳನ್ನು ಬಿಡಿಗಾಸಿಗೆ ಕೊಂಡೆ. ಎಲ್ಲ ಈ ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ. ಇಷ್ಟೆಲ್ಲ ದುನರ್ೀತಿ ನಡೆದೂ ಕಡೆಗೇನಿದೆ ಎಲ್ಲ ಖಾಲಿ ಖಾಲಿ!

ಮನದ ತುಂಬ ತುಂಬಿ ತುಳುಕುವಷ್ಟು ಬೇಸರ ದುಗುಡ ಆವರಿಸಿದೆ. ಏನೇನೊ ಹಳೆಯ ಯೋಚನೆಯಲ್ಲಿರುವಾಗ ಅಂಗಳದಲ್ಲಿ ಕೇಳಿಸಿದ ಹೆಜ್ಜೆ ಸಪ್ಪಳ ವಾಸ್ತವಕ್ಕೆ ತಂದಿತು.

ನೋಡಿದರೆ ಅರವತ್ತು ವರ್ಷದ ಮುದುಕ ನಿಂತಿದ್ದಾನೆ.

'ಸಲಾಮ್ರೀ ಯಪ್ಪಾ'

'ಸಲಾಮಪಾ ಯಣ್ಣಾ ಬಾ' ಅಂದೆ.

'ನೀವು ತನಸುಖ್ ಅಲ್ಲಾ?'

'ಹೌದು'

'ನಂಗೊಂದು ಎಮ್ಮಿ ಕೊಂಡುಕೋ ಬೇಕಾಗ್ಯದ' ನನ್ನ ಪಾದದ ಹತ್ತಿರ ಕೂಡುತ್ತ ಅಂವ ಹೇಳಿದ.

ಮುದುಕನ ಮುಖದಲ್ಲಿ ಬಡತನ, ದುಃಖಗಳು ಮೂಡಿಸಿದ ನೆರಿಗೆಗಳು ಸ್ಪಷ್ಟವಾಗಿದ್ದುವು. ಬದುಕಿನ ದಾರುಣತೆಗೆ ಸೋತು ಜರ್ಜರಿತನಾದವನಂತೆ ತೋರುತ್ತಾನೆ. ನನ್ನ ಇದುವರೆಗಿನ ಬೇಸರವನ್ನೆಲ್ಲ ತೊಲಗಿಸುವಂತಹ ಮಿಂಚೊಂದು ನನ್ನ ತಲೆಯಲ್ಲಿ ಥಟ್ಟನೇ ಹೊಳೆಯಿತು. ಹಾಂ! ಇದು ನನಗೊಂದು ಅದ್ಭುತ ಅವಕಾಶ, ನನ್ನೆಲ್ಲ ಪಾಪಗಳನ್ನು ತೊಳೆದುಕೊಳ್ಳಲು. ಈ ದಿನ ಈ ದೀನ ಮುದುಕನಿಗೆ ಒಂದು ಚೆಂದದ ದನ ಕೊಡಿಸಿ ಜೀವನದಲ್ಲಿ ಒಂದಾದರೂ ಉಪಕಾರ ಮಾಡುವ ಸಮಯವಿದೆಂದು ಅಂದುಕೊಂಡೆ.

ಸ್ವಲ್ಪ ನೀರು ಕುಡಿದು ಅಂವ ಕೇಳಿದ, ' ನಾನಂದದ್ದು ಕೇಳಿಸಿತ್ರಿ?'

'ಹೂಂ. ನೀ ಯಾವ್ದಾರ ಎಮ್ಮಿ ನೋಡೀಯೇನ್?'

'ಹೌದ್ರಿ ನಿಮ್ಗ ಗೊತ್ತಿರೋ ಎಮ್ಮಿನೇ ಅದು.'

'ಎಲ್ಲೈತಿ ಅದ?'

'ಖರೇ ಹೇಳ್ಬೇಕಂದ್ರ ಇಲ್ಲೇ ಐತಿ; ನಿಮ್ಮ ಮಗ್ಗಲಮನಿ ಕಾಶಿ ರೇಗಾರಂದು.'

'ಹಾಂ! ಕಾಶೀ ಎಮ್ಮ್ಯಾ!?'

ಕಾಶಿಯ ಹೆಸರು ಕೇಳುತ್ತಲೇ ನನ್ನ ತಲೆ ಗಿರ್ರೆನ್ನತೊಡಗಿತು. ತಲೆತಲಾಂತರದಿಂದ ಬಡತನದ ಶಾಪವನ್ನು ಬಡಿದುಕೊಂಡಿದೆಯೇನೋ ಅನ್ನುವಂತಹ ಮನೆ, ಗುಳಿ ಕಣ್ಣುಗಳ ದುಃಖ ಮಡುಗಟ್ಟಿದ ಮುಖ ಕಣ್ಮುಂದೆ ಅಳತೊಡಗಿದುವು. ಕಾಶಿಯ ಹೆಂಡತಿಯನ್ನು ಕ್ಯಾನ್ಸರ್ ಹಿಂಡಿ ಹಿಪ್ಪೆ ಮಾಡುತ್ತಿದ್ದು, ಆಕೆಗೆ ಚೌಳಿಕಾಯಿ, ಬೆಂಡಿಕಾಯಿಯಂತಹ ಕೂಸುಗಳಿವೆ. ಆಕೆಯ ಆಪರೇಶನ್ ಮತ್ತು ಔಷಧಿಗಾಗಿ ತನ್ನಲ್ಲಿರುವ ಒಂದೇ ಒಂದು ಎಮ್ಮೆಯನ್ನು ಕಾಶಿ ಮಾರಬೇಕೆಂದಿದ್ದ. ಅದನ್ನು ಮಾರಿಸಿ ಕೊಡುವಂತೆ ನನಗೇ ಪದೇ ಪದೇ ನೆನಪಿಸಿದ್ದ.

ಮಾರಿಸಬಹುದಿತ್ತು. ಆದರೆ ಎಮ್ಮೆಯ ಇತಿಹಾಸ ಅಷ್ಟು ಸರಿ ಇರಲಿಲ್ಲ. ಅದು ಈಗಾಗಲೇ ನಾಲ್ಕು ಸಲ ಕಂದಾ (ಗರ್ಭಪಾತ) ಹಾಕಿತ್ತು. ವೆಟರ್ನರಿ ಡಾಕ್ಟರ್ ಚೆಕ್ ಮಾಡಿ ಇನ್ನೊಮ್ಮೆ ಏನಾದರೂ ಇದು ಕಂದಾ ಹಾಕಿದರೆ ಸಾಯೋದು ಗ್ಯಾರಂಟಿ ಎಂದು ಎಚ್ಚರಿಸಿದ್ದರು. ಈಗ ಅದೇ ಎಮ್ಮೆಯನ್ನು ಕೊಡಿಸೆಂದು ಈ ಪಾಪದ ಮುದುಕ ಗಂಟು ಬಿದ್ದಿದ್ದಾನೆ.

ನಾನು ದೊಡ್ಡ ಅಡಕತ್ತರಿಯಲ್ಲಿ ಸಿಲುಕಿಕೊಂಡೆ. ಒಳಗೊಳಗೆ ನೋವು ತಿನ್ನುತ್ತ ನನಗೆ ಒಂದು ಶಬ್ದವನ್ನೂ ಮಾತನಾಡಲಾಗಲಿಲ್ಲ.

ಮುದುಕನೇ ಮೌನ ಮುರಿದ, 'ಏನ್ ವಿಚಾರ ಮಾಡ್ಲಿಕತ್ತೀರಿ? ನಾ ಹೇಳಿದ್ದು ಸರಿ ಬರಲಿಲ್ಲೇನ್ರೀ?

'ಹೇ ಹಂಗೇನಿಲ್ಲ, ಅದ ಕಾಶಿ ಎಮ್ಮೇನು?'

'ಹೌದ್ರಿ, ಮತ್ತ್ಯಾಕ ಚಿಂತಿ ಮಾಡಾತೀರಿ? ಆ ಎಮ್ಮಿ ಒಳಗ ಏನಾರ ಊನ ಐತೇನ್ರೀ ಮತ್ತ? ಕಾಲ ಬೀಳತೇನ್ರೀ ಇಲ್ಲ ಅನಬ್ಯಾಡ್ರೀ ಯಪ್ಪಾ ನಾ ಬಡವ. ನನಗಾಗಿ ಅಲ್ಲದಿದ್ರೂ ನನ ಮಗನ ಮಾರಿ ನೋಡೆರ ಆ ಎಮ್ಮಿ ಕೊಡಸ್ರೀ!'

ನಿನ್ನ ಮಗಾ?

'ಹೂಂನ್ರೀ, ಅಂವಾ ಯಾಡ ವಷರ್ಾತು ದವಾಖಾನ್ಯಾಗ ಇದ್ದನ್ರಿ. ನಿನ್ನ್ಯ ಬಂದಾನ್ರೀ. ಡಾಕತರ್ ಅಂವಗ ಹಾಲ ಕುಡಿಬೇಕಂತ ಹೇಳ್ಯಾರ. ಅದಕ ಈ ಎಮ್ಮೀ ತಗೋಬೇಕಂತ ಇಚಾರ ಮಾಡೇನ್ರೀ. ಇದರಲೇ ನನ ಮನೀ ಉಪ್ಪ ಖಾರಾನೂ ಅಕ್ಕೈತಿ, ಹುಡುಗಗ ಹಾಲ ಸಿಗುವಂಗೂ ಅಕ್ಕೈತಿ ಅನ್ನೋದು ನನ ಬರೋಸ್ರಿ' ಅಂದ.

'ಓಹ್!' ಉದ್ಗರಿಸಿದೆ.

'ಅದಕ್ರೀ ಸಾಹುಕಾರ, ಇದೊಂದ್ ಕೆಲಸ ಮಾಡಿ ಪುಣ್ಯ ಕಟ್ಕೋಳ್ರಿ. ನಾ ಸೋತ ಹೋಗೆನ್ರಿ.'

ನನ್ನೊಳಗೆ ನಡೆಯುತ್ತಿರುವ ಯುದ್ಧ ಮುದುಕನಿಗೆ ಗೊತ್ತು? ಅಲುಗಾಡದೇ ಕುಳಿತಿದ್ದೆ. ಇಡೀ ಜಗತ್ತು ನನ್ನ ಸುತ್ತಲೇ ಗಿರಗುಟ್ಟುತ್ತಿದೆ ಅನ್ನಿಸ್ತು. ಎದೆಯಲ್ಲಿ ಕೋಲಾಹಲದ ಸುನಾಮಿ ಎದ್ದಿತ್ತು. ನನ್ನ ಇಪ್ಪತ್ತು ವರ್ಷದ ದಲಾಲಿ ಜೀವನದಲ್ಲಿ ಯಾವುದೂ ನನ್ನನ್ನು ಇಷ್ಟು ಆಳವಾಗಿ ಅಲುಗಾಡಿಸಿರಲಿಲ್ಲ. ಒಂದೇ ಹೊಡೆತಕ್ಕೆ ಮುದುಕ ನನ್ನೆಲ್ಲ ಪಾಪಗಳಿಗೆ ಶಿಕ್ಷೆ ನೀಡಿದ್ದ. ಚಾಚಿದ ತೋಳುಗಳ ಎರಡು ಹಸಿದ ಆಕೃತಿಗಳು ನನ್ನೆದುರು ನಿಂತಿದ್ದುವು. ಎರಡು ಜೀವಂತ ಅಸ್ಥಿಪಂಜರಗಳು! ಯಾರನ್ನು ಉಳಿಸಲಿ; ಅಳಿಸಲಿ ಯಾರನ್ನು!? ಪ್ರಶ್ನೆಗಳು ನನ್ನನ್ನು ತೀವ್ರವಾಗಿ ಇರಿದುವು. ಈ ಮುದುಕನಿಗೆ ಎನು ಹೇಳಲಿ ಹೂಂ ಅಥವಾ ಉಹೂಂ? ನನ್ನ ಒಂದು ಹೂಂ ಮುದುಕನನ್ನು ಕೊಂದು ಹೂಂಕರಿಸುತ್ತದೆ. ಒಂದು ಉಹೂಂ ಕಾಶಿಯ ಚರಮಗೀತೆ ಹಾಡುತ್ತದೆ.

'ಏನ್ರೀ ಯಪ್ಪಾ ಕಾಶೀ ಮನಿಗೆ ಹೋಗೋನೇನ್ರಿ? ಮುದುಕ ಮತ್ತೇ ಕೇಳಿದ.

'ಯಜ್ಜಾ, ನಾ ದಲಾಲ ಅಲ್ಲ ಹೋಗ!!' ನಾ ಚೀರಿದೆ 'ನಿನಗ ಹೆಂಗ ಅನಸ್ತೈತಿಹಂಗ ಮಾಡು'

ಸಾವಕಾಶ ತನ್ನ ಕೋಲಿನ ಸಹಾಯದಿಂದ ಮುದುಕ ಎದ್ದ, ಕಾಲು ಕಟ್ಟಿದ ಮುದಿ ಕುದುರೆಯಂತೆ ನಡಗುತ್ತ ನಡೆದ.

ನನ್ನ ಹೊರಸಿಗೆ ಬೆನ್ನು ಒರಗಿಸಿದೆ. ಜಂತಿಯಲ್ಲಿ ಗುಬ್ಬಿಗಳ ಜಗಳ ಇನ್ನೂ ಮುಗಿದಿರಲಿಲ್ಲ.






-ವಿಠಲ ದು ದಳವಾಯಿ
ಶಿಕ್ಷಕರು
ಮುಗಳಿಹಾಳ ಅಂಚೆ
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ 591129
ಮೊ: 9880300485
        8970075833








ನವಿಲು ಕಣ್ಣಿನ ಗಾಯದ ಚಿತ್ರಗಳು

ಊರು ಎನ್ನುವ ಪದ ಎಲ್ಲ ಸಮುದಾಯಗಳನ್ನು ಒಳಗೊಂಡ ತಾಣ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸುಳ್ಳಾಗುತ್ತಿದೆ. ಅದು ಮಾನಸಿಕವಾಗಿ ಕೇರಿಯಿಂದ ಬೇರ್ಪಟ್ಟ ಜಾಗ ಮಾತ್ರ. ಇದು ಇವತ್ತಿನ ಸ್ಥಿತಿಯೋ ಅಥವಾ ಯಾವತ್ತಿಗೂ ಹೀಗೆ ಇತ್ತೋ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಗ್ರಾಮೀಣಕೇರಿ ಎನ್ನುವ ಸಮುದಾಯ ಅದು ಒಂದು ಜೀವ ಸಮುದಾಯವಾಗಿಯೂ ಸಹ ಇವತ್ತು ನಮ್ಮನ್ನಾಳುವ ಪ್ರಭುಗಳಿಗೆ ತೋರುತ್ತಿಲ್ಲ. ಇದೇ ಸಮುದಾಯದ ಪ್ರತಿನಿಧಿಗಳಾಗಿ ರಾಜಕೀಯ ಮುಖಂಡರಾದವರೂ ಸಹ ಅಲ್ಲಿಯೂ ಮತ್ತೊಂದು ರೀತಿಯ ದಾಸ್ಯದಲ್ಲಿಯೇ ಮುಂದೆ ನಡೆದಿದ್ದಾರೆ. ತಾವು ಹುಟ್ಟಿ ಬೆಳೆದು ಬಂದ, ತಮಗೆ ಬದುಕು ಕೊಟ್ಟ ಹಳ್ಳಿಗಳ ಕೇರಿ ಇಂದು ಅವರಿಗೆ ಅಪರಿಚಿತವಾಗಿದೆ. ಕನಿಷ್ಠ ಪಕ್ಷ ಗ್ರಾಮೀಣಕೇರಿಗಳ ತಳಮಳವನ್ನೂ ಕೇಳಿಸಿಕೊಳ್ಳುವ ವ್ಯವಧಾನವೂ ಇಲ್ಲದ ಸ್ಥಿತಿಗೆ ತಳ ಸಮುದಾಯದ ಪ್ರತಿನಿಧಿಗಳು ತಲುಪಿರಬೇಕಾದರೆ, ಇನ್ನು 'ಒಬ್ಬ ಏಕಲವ್ಯನಿಗಾಗಿ ಹಾಸ್ಟೇಲ್ಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ' ಎನ್ನುವ ನಾಡ ಪ್ರಭುಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ?


ಭೋಜದಲ್ಲಿ ಮುರಿದು ಬಿದ್ದ ಕೇರಿ ಬದುಕು

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ತುದಿಯಲ್ಲಿರುವ ಈ ಭೋಜ ಕನರ್ಾಟಕದ ಗಡಿಯಲ್ಲಿರುವ ಒಂದು ಹಳ್ಳಿ. ಇತ್ತೀಚೆಗೆ ಒಂದು ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಊರಿನ ಅಂದಾಜು ಐದನೂರಕ್ಕು ಹೆಚ್ಚು ಜನ ಕೇರಿಯ ಮೇಲೆ ದಾಳಿ ಇಟ್ಟರು. ಅದೀಗ ನಿದಿರೆಗೆ ಜಾರುತ್ತಿದ್ದ ಜೀವಗಳ ಜೀವ ಕೈಗೆ ಬಂದು ತಲ್ಲಣದಲ್ಲಿ ಮುದುಡಿ ಹೋದವು. ದಾಳಿಕೋರರು ತೂರಿದ ಕಲ್ಲುಗಳ ಬಾಯಿಗೆ ಕರುಣೆಯಿರಲಿಲ್ಲ. ಆ ಕಲ್ಲುಗಳಿಗೆ ಮೊದಲು ಬಲಿಯಾದದ್ದು ಆ ಕೇರಿಯ ಬೆಳಕು. ಬೀದಿಯ ಕಂಬದ ದೀಪಗಳೆಲ್ಲ ಉದುರಿ ಹೋದವು . ಒಮ್ಮಿಂದೊಮ್ಮೆಗೆ ಕೇರಿಯ ತುಂಬ ಭಯಾನಕ ಕತ್ತಲು. ಕಿವಿಗಡಚಿಕ್ಕುವ ಅಸಹ್ಯ ಬೈಗುಳಗಳು. ಮನೆ ಮನೆಯ ಕದಗಳೆಲ್ಲ ಮುರಿದು ಬಿದ್ದವು. ಮನೆಯೊಳಗಿನ ಜೀವಗಳೆಲ್ಲ ಬೇಟೆಗಾರರಿಗೆ ಹೆದರಿದ ಮೊಲಗಳಂತೆ ನಡುಗುತ್ತಾ ಮೂಲೆ ಸೇರಿದವು. ಇವರ ಕ್ರೌರ್ಯಕ್ಕೆ ಬಲಿಯಾಗದ ವಸ್ತುಗಳೆ ಉಳಿಯಲಿಲ.್ಲ ನಾಲ್ಕಾರು ಬೈಕ್ ಗಳು ನಜ್ಜು ಗುಜ್ಜಾದವು. ಗುಡಿಸಲುಗಳು ನಡಮುರಿದುಕೊಂಡು ನೆಲಕ್ಕೆ ಒರಗಿದವು. ಗೋಡೆಗಳೆಲ್ಲ ಅಂಗಾತ ಮಲಗಿದವು ವಯಸ್ಸಾದ ಮುದುಕರಂತೆ. ಒಳಕ್ಕೆ ಬಂದು ಕೈಗೆ ಸಿಕ್ಕು ಒಡೆದು ಹೋದ ವಸ್ತುಗಳಲ್ಲಿ ಟಿ.ವಿ., ಡಿ.ವಿ.ಡಿ, ಕುಚರ್ಿಗಳು ತಾವೇ ಸೇರಿದವು. ಈ ರೀತಿ ಹಾಳು ಮಾಡುವ ಮನಸ್ಸುಗಳಿಗೆ ಬಲಿಯಾದ ವಸ್ತುಗಳ ಆಯ್ಕೆಯಲ್ಲಿಯೇ ತಿಳಿಯುತ್ತದೆ ಇವರ ಅಸಹನೆ ಎಂಥದ್ದು ಎಂಬುದು. ವಸ್ತುಗಳನ್ನು ಮತ್ತೆ ಕೊಳ್ಳಬಹುದು, ಆದರೆ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಹದಿನಾರು ವರುಷದ ಹುಡುಗನಿಗೆ ಆದ ತೊಂದರೆ ತುಂಬಿಕೊಡುವರಾರು? ದುರಾಕ್ರೋಶದ ಮನಸ್ಸು ಒದ್ದ ರಭಸಕ್ಕೆ ಕದದ ಹಿಂದೆ ಆತು ನಿಂತಿದ್ದ ಗಭರ್ಿಣಿ ಹೆಣ್ಣು ಮಗಳು ನೆಲಕ್ಕೆ ಬಿದ್ದು ಅನುಭವಿಸಿದ ನೋವಿಗೆ ಹೊಣೆ ಯಾರು?

ಕೇರಿಗೆ ಸೇರಿದ ಕೆಲ ಹುಡುಗರು ರಸ್ತೆಯಲ್ಲಿ ವಾಲಿಬಾಲ್ ತೂರಾಡುತ್ತಾ ಬರುತ್ತಿದ್ದಾಗ ಒಬ್ಬ ಅಜ್ಜನಿಗೆ ಬಡಿದಿದೆ, ಈ ತಪ್ಪಿಗೆ ಹುಡುಗರನ್ನು ಹಿಡಿದು ಬಡೆದದ್ದಾಗಿದೆ. ಅದೂ ಅಲ್ಲದೆ ತಪ್ಪು ಮಾಡಿದ ಹುಡುಗರ ತಂದೆ ತಾಯಿಗಳು ಅಜ್ಜನ ಮನೆಗೆ ಹೋಗಿ ತಪ್ಪಾಯಿತೆಂದು ಕೈ ಮುಗಿದು ಕ್ಷಮೆ ಕೇಳಿ ಬಂದದ್ದಾಗಿದೆ. ಮತ್ತೊಂದು ದಿನ ಕೇರಿಯವನೊಬ್ಬ ದಾರಿಯಲ್ಲಿ ಕುಡಿದು ಓಲಾಡುತ್ತ ಬರುತ್ತಿದ್ದಾಗ ಒಬ್ಬ ಹೆಣ್ಣುಮಗಳಿಗೆ ಕೈ ತಾಗಿಸಿದ್ದಾನೆ. ಆ ಹೆಣ್ಣುಮಗಳು ಕುಡಿದವನನ್ನು ಬಾರಿಸಿದ್ದಾಳೆ. ಕುಡಿದ ಅಮಲಿನ ಅವಿವೇಕದ ವ್ಯಕ್ತಿ ಮರಳಿ ಆ ಮಹಿಳೆಗೆ ಹೊಡೆದು ಪರಾರಿಯಾಗಿದ್ದಾನೆ. ಇದು ಘಟನೆಯ ಸ್ಥಳದಲ್ಲಿ ಈ ಹಲ್ಲೆಗೆ ತಿಳಿದು ಬಂದ ಕಾರಣ.

ವಿಷಾದದ ಸಂಗತಿಯೆಂದರೆ ಮೇಲ್ಜಾತಿಯವರೇ ಸಾಮೂಹಿಕವಾಗಿ ತಪ್ಪು ಮಾಡಿದರೂ , ಅವರ ತಪ್ಪಿಗೆ ಕೇರಿಯೇ ಸಾಮೂಹಿಕವಾಗಿ ಶೋಷಣೆಗೆ ಬಲಿಯಾಗಬೇಕಾಗುತ್ತದೆ. ಕೇರಿಯವ ಒಬ್ಬನೇ ತಪ್ಪು ಮಾಡಿದರೂ , ಇಡೀ ಕೇರಿಯೇ ಆ ತಪ್ಪಿಗೆ ಬಲಿಯಾಗಬೇಕಾಗುತ್ತದೆ. ಭೋಜ ಕ್ಕೆ ಸಂಬಂಧಿಸಿದಂತೆ ಇಲ್ಲಿ ತಪ್ಪು ಮಾಡಿದವನನ್ನು ಶಿಕ್ಷಿಸಲು ಬೇರೆ ದಾರಿಗಳಿರಲಿಲ್ಲವೆ? ಕನರ್ಾಟಕದ ಗ್ರಾಮೀಣಕೇರಿಗಳ ವಾಸ್ತವಗಳೇ ಹೀಗೆ ಎನಿಸುತ್ತದೆ.

ಹೇಗಿದೆ ನಾಯಕನೂರು?

ಊರಿನ ಜಮೀನ್ದಾರನ ಕೆಂಗಣ್ಣಿಗೆ ಬಲಿಯಾಗಿ, ಬಹಿಷ್ಕಾರಕ್ಕೆ ಒಳಗಾಗಿದ್ದ ನಾಯಕನೂರಿನ ಕೇರಿಯ ಜನ ಸಕರ್ಾರದ ಮಧ್ಯ ಪ್ರವೇಶದಿಂದ ಸ್ವಲ್ಪ ಸಮಾಧಾನದಿಂದಿದ್ದರು. ಎಷ್ಟೆಲ್ಲ ಜನಪ್ರತಿನಿಧಿಗಳು , ಅಧಿಕಾರಿಗಳು ಬಂದು ಹೋಗಿ ಕೆಲವು ತಿಂಗಳೇ ಆದರೆ ಇಲ್ಲಿಯ ಪರಿಸ್ಥಿತಿ ವಿಷಾದ ಹುಟ್ಟಿಸುತ್ತದೆ. ಇವರನ್ನು ಮಾತನಾಡಿಸಿದಾಗ ಅವರ ಮನದಾಳದಿಂದ ಹೊರ ಬೀಳುವ ಮಾತುಗಳು ಆದ್ರ್ರತೆ ತರಿಸುತ್ತವೆ.

ಇನ್ನೇನು ಬಿದ್ದೇ ಬಿಡುತ್ತವೆ ಎನ್ನಿಸುವಂಥ ಮನೆಗಳು , ಇಕ್ಕಟ್ಟಾದ ಸಂದಿಗಳಲ್ಲಿ ಮೈಯೆಲ್ಲ ಗಾಯ ಮಾಡಿಕೊಂಡು ನಿಂತುಕೊಂಡಿವೆ. ಈ ಕೇರಿಯಲ್ಲಿ ಸುಮಾರು 37 ಕುಟುಂಬಗಳಿವೆ. ಒಬ್ಬರಿಗೂ ಹೇಳಿಕೊಳ್ಳಲೂ ಸಹ ತುಂಡು ಭೂಮಿಯಿಲ್ಲ. ಯಾವ ಮನೆಗೂ ಶೌಚಾಲಯವೇ ಇಲ್ಲವೆಂದ ಮೇಲೆ 'ಗ್ರಾಮ ನೈರ್ಮಲ್ಯ' ಎಲ್ಲಿಂದ ಬರಬೇಕು.ಕೆಲವು ಕಡೆ ಮಾಡಲು ಕೆಲಸಗಳಿವೆ, ಆದರೆ ಕೈಗಳಿಲ್ಲ. ನಾಯಕನೂರಿನ ಈ ಕೇರಿಯಲ್ಲಿ ದುಡಿಯಲು ಕೈಗಳು ಸಿದ್ಧ ಇವೆ, ಆದರೆ ಕೆಲಸ ಕೊಡುವ ಮನಸ್ಸುಗಳಿಲ್ಲ. ತಿಪ್ಪಣ್ಣ . ಮಾದರ ಯಾವಾಗಲೋ ನಿಮರ್ಿಸಲಾಗಿರುವ ತನ್ನ ಮನೆಯಲ್ಲಿ 20 ಜನರ ತನ್ನ ಕುಟುಂಬದೊಂದಿಗೆ ಒಟ್ಟಿಗೆ ವಾಸಿಸುತ್ತಿರುವುದಾಗಿ ಹೇಳುತ್ತಾನೆ. 'ಮನೆಗೆ ಅಳಿಯ ಬಂದರೆ ದುರ್ಗಮ್ಮನ ಗುಡಿಯೇ ಗತಿ' ಎನ್ನುತ್ತಾನೆ. ಇದು ತಿಪ್ಪಣ್ಣನ ಕಥೆ ಮಾತ್ರವಲ್ಲ. ಹಲವು ಜನರದ್ದು ಇದೇ ವ್ಯಥೆ. ಕರಿಯಪ್ಪ. ತಾಯಿ ಯಲ್ಲವ್ವ ಮಾದರ ಎಂಬ ಅಜ್ಜನಿಗೆ ಎಂಟು ತಿಂಗಳಿನಿಂದ ವೃಧ್ದಾಪ್ಯ ವೇತನ ಬಂದಿಲ್ಲ. ಕರಿಯಪ್ಪ ತಾಯಿ ಕರಿಯವ್ವ ಮಾದರ ಎಂಬ ಅಜ್ಜನ ಸ್ಥಿತಿಯೂ ಇದೆ. ಈ ಇಳಿವಯಸ್ಸಿನಲ್ಲಿಯೂ ಕೆಲಸ ಹುಡುಕಿಕೊಂಡು ದುಡಿದು ತಿನ್ನದೆ ಗತ್ಯಂತರವಿಲ್ಲದ ಸ್ಥತಿಯಲ್ಲಿ ಈ ಅಜ್ಜಂದಿರಿದ್ದಾರೆ.

ಈ ಕೇರಿ ಅಸಮಾನ ಅಭಿವೃಧ್ದಿಯ ಚಿತ್ರದಂತಿದೆ. ಇಲ್ಲಿ ತಲೆತಲಾಂತರದಿಂದ ಇಂದಿನವರೆಗೂ ಒಬ್ಬನೇ ಒಬ್ಬ ನಿಗೂ ನೌಕರಿ ಸಿಕ್ಕಿಲ್ಲವೆಂದರೆ, ಮೀಸಲಾತಿ ಮರೀಚಿಕೆಯೇ ಅಲ್ಲವೇ? ಸ್ವಾತಂತ್ರ್ಯ ಬಂದು ಆರು ದಶಕಗಳೇ ಆಗಿದ್ದರೂ ನಮ್ಮ ಕೇರಿಗಳು ಇನ್ನೂ ಅಲ್ಲೇ ಇವೆ. ಆಶ್ರಯ ಯೋಜನೆ ಯಾರಿಗೆ ಆಶ್ರಯ ಕೊಟ್ಟಿದೆ? ಸಂಧ್ಯಾ ಸುರಕ್ಷಾ ಯಾರ ರಕ್ಷಣೆಗೆ ನಿಂತಿದೆ?

ನಡುಮಧ್ಯಾಣ ತಲೆ ಮೇಲೆ ಕೈ ಹೊತ್ತು ಗುಂಪಾಗಿ ಕುಳಿತ ಮಹಿಳೆಯರನ್ನು ಮಾತನಾಡಿಸಿದರೆ ಇಸ್ಟು ದಿನ ಉದ್ಯೋಗ ಖಾತ್ರಿ ಒಳಗ ಕೆಲಸಕ್ಕ ಹೊಕ್ಕಿದ್ವಿರಿ, ಈಗ ಅದು ಮುಗಿದೈತಿ.. ಕೆಲಸಕ್ಕ ಯಾರೂ ಕರಿ ಒಲ್ರು , ಬುದ್ದಿ ಬರಬೇಕ ನಿಮ್ಗ ಅಂತಾರೀ.. ಅದ್ಕ ಚಿಂತ್ಯಾಗೇತ್ರಿ. ಈ ಊರಿನಲ್ಲಿ ಖಾಯಿಲೆ ಬಿದ್ದರೆ ಔಷಧಿಗಾಗಿ ಪಕ್ಕದ ಊರಿಗೆ ಹೋಗಬೇಕಾದ ಸ್ಥಿತಿಯಲ್ಲಿ ಈ ಜನರಿದ್ದಾರೆ. ನೀವು ಜಾತ್ರೆ ಮಾಡುವುದಿಲ್ಲವೆ ಎಂಬ ಪ್ರಶ್ನೆಗೆ ಇಲ್ರಿ.. ಒಂದು ಸಾರಿ ಎಲ್ಲಾರೂ ಸೇರಿ ನಮ್ಮ ಕೇರಿ ದುರ್ಗವ್ವನ ಜಾತ್ರಿ ಮಾಡೋಣಂತ ನಿಧರ್ಾರ ಮಾಡಿದ್ವಿ.. ಆದ್ರ ನಮ್ಮ ದುರ್ಗವ್ವಗ ಯಾರೂ ಬನ್ನಿ ಮುಡಿಯಾಕ ತಮ್ಮ ಹೊಲದೊಳಗ ಬಿಟ್ಟುಕೊಳ್ಳಲಿಲ್ರಿ.. ಅದ್ಕ ಬಿಟ್ಟು ಬಿಟ್ವಿರಿ ಎನ್ನುತ್ತಾರೆ. ಶೋಷಣೆ ಸಾಂಸ್ಕೃತಿಕವಾಗಿಯೂ ಇರಬಹುದೆ?

ಈ ಬಹಿಷ್ಕಾರದ ಘಟನೆ ನಡೆದ ನಂತರ ಬಂದ ಜನ ಪ್ರತಿನಿಧಿಗಳು ಎಲ್ಲರ ಮನೆ ರಿಪೇರಿ ಮಾಡಿಸಿಕೊಡುವುದಾಗಿಯೂ, ವಾರಕ್ಕೊಂದು ಸಾರಿ ಬಂದು ನಿಮ್ಮ ಯೋಗಕ್ಷೇಮ ವಿಚಾರಿಸುವುದಾಗಿಯೂ ಹೇಳಿ ಹೋದದ್ದೇ ಬಂತು ಅವರಿಗಾಗಿ ಇವರು ಇನ್ನೂ ಕಾಯುತ್ತಿದ್ದಾರೆ. ಭೂಮಿ ಕೊಡುವುದಾಗಿ ಹೇಳಿದ್ದನ್ನು ಹಗಲಿರುಳು ಕನವರಿಸುತ್ತಿದ್ದಾರೆ. ಭೂಮಿ ಕಿತ್ತುಕೊಳ್ಳಲು ಮಾತ್ರ ಗೊತ್ತಿರುವ ನಮ್ಮ ನಾಡ ಪ್ರಭುಗಳಿಂದ, ತಲೆಮಾರಿನಿಂದಲೂ ನಿರ್ಗತಿಕ ಬದುಕು ದೂಡುತ್ತಿರುವ ತಳಸಮುದಾಯದ ಬದುಕಿಗೆ ಆಧಾರವಾಗಿ ಭೂಮಿಯನ್ನು ದಯಪಾಲಿಸುವ ನೈತಿಕ ಯೋಗ್ಯತೆ ಹೇಗೆ ಬಂದೀತು?

ನಾಯಕನೂರಿನ ಕೇರಿಯ ಜನ ಐವತ್ತು ಲಕ್ಷ ಅನುದಾನ ಬಂದಿರುವನ್ನು ಅಧಿಕಾರಿಗಳಿಂದ ತಿಳಿದು ಆ ದುಡ್ಡಿನಲ್ಲಿ ತಮಗೊಂದು ವಸತಿ ಪ್ರದೇಶ, ಅದರಲ್ಲಿ ಕನಿಷ್ಠ ಅಗತ್ಯಗಳಾದರೂ ಇರುವ ಮನೆಗಳು ಬೇಕೆಂದು ಬೇಡಿಕೆ ಇಟ್ಟಿರುವುದಾಗಿ ಹೇಳುತ್ತಾರೆ. ಯಾರ ಮೇಲೂ ಅವಲಂಬಿತರಾಗದೆ ತಮ್ಮ ಅನ್ನ ತಾವೇ ದುಡಿದುಕೊಳ್ಳಲು , ದುರ್ಗವ್ವನಿಗೆ ಬನ್ನಿ ಮುಡಿಸಲು, ಭೂಮಿಗಾಗಿ ಹಂಬಲಿಸುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸುವ ಪ್ರಬಲ ಇಚ್ಛಾಶಕ್ತಿ ಇರುವವರಾರು?

ಮತ್ತೆ ಮತ್ತೆ ಏಕಲವ್ಯ

ಇತ್ತೀಚಿನ ಕೆಲ ಬೆಳವಣಿಗೆಗಳನ್ನು ನೋಡಿದರೆ ಇದು ತಳಸಮುದಾಯಗಳ ಅಳಿವಿನ ಕಾಲ ಎನ್ನಿಸುತ್ತದೆ. ನಮ್ಮ ಊರುಗಳ ಶಾಲೆಗಳನ್ನು ಕೋಟರ್ಿಗೆ ಹೋಗಿ ಉಳಿಸಿಕೊಳ್ಳಲು ಹೆಣಗುತ್ತಿರುವಾಗಲೇ, 154 ಪರಿಶಿಷ ್ಟಜಾತಿ ಪಂಗಡಗಳ ಹಾಸ್ಟೆಲ್ಗಳನ್ನು ಮುಚ್ಚುತ್ತಿರುವ ಸುದ್ದಿ ಬಂದಿದೆ. ಕೆಲವು ಹಾಸ್ಟೆಲ್ಗಳ ಒಂದು ರೂಮಿನಲ್ಲಿ ಹಿಡಿಸಲಾರದಷ್ಟು ಹುಡುಗರು ತುಂಬಿಕೊಂಡು ಓದುತ್ತಿರುವುದಕ್ಕೆ ಇನ್ನೂ 200 ಹಾಸ್ಟೆಲ್ ಗಳ ಬೇಡಿಕೆ ಸರಕಾರದ ಮುಂದಿರುವಾಗಲೇ ಈ ನಿಧರ್ಾರವೆಂದರೆ , ನಮ್ಮನ್ನಾಳುವ ಪ್ರಭುಗಳ ನೀತಿ ಕೇವಲ ದಲಿತ ವಿರೋದಿ ಮಾತ್ರವಲ್ಲ , ಮುಖ್ಯವಾಗಿ ಅಸ್ಪೃಶ್ಯರ ವಿರೋಧಿ ಎನಿಸುತ್ತದೆ.

ಏಕಲವ್ಯರು ಮತ್ತೆ ಮತ್ತೆ ಅನಾಥರಾಗುತ್ತಿದ್ದಾರೆ. ಜಮಖಂಡಿಯ ಹಾಸ್ಟೆಲ್ ವೊಂದರಲ್ಲಿ ತಿನ್ನಬಹುದಾದ ಅನ್ನಕ್ಕಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುವ ಸ್ಥಿತಿಗೆ ಬಂದಿರುವಾಗ ಹಾಸ್ಟೆಲ್ ಗಳೆ ಮುಚ್ಚಿದರೆ ಮುಂದೇನು? ಅಕ್ಷರ ದಿಂದಲೆ ಅನ್ನದ ಕನಸು ಕಾಣುವ ಕಣ್ಣುಗಳಿಗೆ ಭರವಸೆಗಳೆ ಉಳಿಯುತ್ತಿಲ್ಲ. ಆಧುನಿಕತೆಯ ನಾಗಾಲೋಟದಲ್ಲಿ ಶಿಕ್ಷಣ ದುಬಾರಿ ಸರಕಾಗಿರುವಾಗ ನಾಯಕನೂರಿನಂಥ ಕೇರಿಗಳಿಂದ ಬರುವ ಕಣ್ಣೀರು ಮಾರವ ಹುಡುಗರು ಕೊಳ್ಳುವುದೆಲ್ಲಿಂದ ಬಂತು ? ಅಕ್ಷರದಿಂದ ಬದುಕಿಗೆ ಬೆಳಕು ಹುಡುಕುವ ಹುಡುಗರ ಆಸೆಗಳು ಕೇರಿಯಲ್ಲೇ ಕಮರಬೇಕೆ?

ಗಾಯಕ್ಕೆ ಮುಲಾಮು ಹುಡುಕುತ್ತಾ..

ಈಗೀಗ ನವಿಲಿನ ಅಸ್ಟೂ ಕಣ್ಣಿನಲಿ ತೋರಲಾಗದ ಗಾಯದ ಚಿತ್ರಗಳು. ಕೇರಿ ಅಲ್ಲೇ ಕಾಲು ಮುರಿದುಕೊಂಡು ಬಿದ್ದಿದೆ. ಸಂವಿಧಾನಿಕ ಮೀಸಲಾತಿ ಅಸಮಾನತೆಯ ಅಭಿವೃಧ್ದಿಗೆ ಬಲಿಯಾಗಿದೆ.ಈ ಗಾಯಗಳು ಕೇವಲ ನಿರ್ಗತಿಕತೆಯಿಂದ ಮಾತ್ರ ಆದವುಗಳಲ್ಲ, ಯಾರೋ ಬಾರಿಸಿದ ಗಾಯಗಳೂ ಸೇರಿವೆ. ಸಾವಿರ ಸಾವಿರ ಕೋಟಿಯ ಲೆಕ್ಕದಲ್ಲಿ ಮಾತನಾಡುವ ನಮ್ಮ ಸರಕಾರದ ಅಭಿವೃಧ್ದಿ ನೀತಿ ಯಾರ ಪರವಾಗಿದೆ ಅಥವಾ ಯಾರ ಹೆಸರಿನಲ್ಲಿ ಯಾರಿಗೆ ದೊರೆಯುತ್ತಿದೆ ಎಂಬುದನ್ನು ಅವಲೋಕಿಸಿದಾಗ ಸಿಕ್ಕ ಕೆಲವು ಚಿತ್ರಗಳು ಮಾತ್ರ ಇವು. ದುಡಿಯಲು ಜನರಿಲ್ಲ ಎಂಬ ಕೊರಗು ನಾಯಕನೂರಿನಂತ ಊರುಗಳಲ್ಲಿ ಎಷ್ಟು ನಿಜ. ಊರು ಮತ್ತು ಕೇರಿಯ ನಡುವಿನ ಅಂತರ ಬರಬರುತ್ತಾ ಕಡಿಮೆಯಾಗಬೇಕಾದದ್ದು ಬದಲಾಗಿ ಆಧುನಿಕತೆಯ ಧಾವಂತದಲ್ಲಿ ಕೇರಿಯನ್ನು ಮರೆತ ಊರು ಬಹಳ ದೂರ ಬಂದು ಬಿಟ್ಟಿದೆ, ಅಲ್ಲಿಯೇ ಉಳಿದವರಿಗೆ ತೆವಳಲೂ ಸಾಧ್ಯವಾಗುತ್ತಿಲ್ಲ.

ಜಾತಿ ಮಾತ್ರ ಇಂದು ತನ್ನ ಕ್ರೌರ್ಯ ಪ್ರದಶರ್ಿಸುತ್ತಿಲ್ಲ, ಭೋಗದ ವಾರಸುದಾರರ ಆಳದ ಸ್ವಾರ್ಥ ಇಲ್ಲಿ ತನ್ನ ಕರಾಳತೆ ಮೆರೆಯುತ್ತಿದೆ. ಇಂದು ದಲಿತ ಲೋಕ ಸಮಾನ ಆಭಿವೃಧ್ದಿಗೆ ಹಪಿಹಪಿಸುತ್ತಿಲ್ಲ, ಉಳಿವಿಗಾಗಿ ಹೋರಾಟ ನಡೆಸುತ್ತಿದೆ. ಅನ್ನ, ವಸತಿ, ಬಟ್ಟೆಗಳು ಕಡಿಮೆಯಾದರೂ ಬದುಕೇವು ವಿದ್ಯಗೇ ಕುತ್ತು ಬಂದರೆ ಹೇಗೆ ಬದುಕುವುದು?

ಯೋಜನೆ, ಆಯೋಗ, ಅಧಿಕಾರ ಯಾವುದಕ್ಕಿವೆ, ಅವು ಇರುವುದಾದರೂ ಎಲ್ಲಿ ಎಂದು ನಮ್ಮ ಕೇರಿಗಳು ಕೇಳುತ್ತಿವೆ. ಉತ್ತರಿಸುವವರು ಸಿಂಹಾಸನ ಉಳಿಸಿಕೊಳ್ಳುವ ಅವಸರದಲ್ಲಿದ್ದಾರೆ. ಹೇಗೆ ಅಭಿವೃಧ್ದಿ ಸಾಧ್ಯ ಎಂಬುದು ಮುಖ್ಯವಾಗದೆ, ಯಾರಿಗೆ ಪಟ್ಟಾಭಿಷೇಕವಾಗಿ ಯಾರು ಸಾರೋಟಿನಲ್ಲಿ ಮೆರವಣಿಗೆ ಹೊರಡಬೇಕು ಎಂಬುದೇ ಮುಖ್ಯವಾಗಿರುವವರಿಂದ ಕೇರಿಯ ಗಾಯದ ಕಣ್ಣಿಗೆ ಮುಲಾಮು ಹೇಗೆ ನಿರೀಕ್ಷಿಸುವುದು?

ಇಷ್ಟೆಲ್ಲದರ ಮಧ್ಯ ಸವಣೂರಿನ ಭಂಗಿ ಬಂಧುಗಳು ನಡೆಸಿದ ಎರಡು ವರ್ಷದ ನಿರಂತರ ಹೋರಾಟದ ಛಲದಿಂದ , ಕಡಿಮೆಯಾದರೂ ಇರಬಹುದಾದ ಕೆಲವು ಸಾಂಸ್ಕೃತಿಕ, ಸಾಹಿತ್ಯಿಕ, ತಳಸಮುದಾಯದ ನಾಯಕರ ಚಿಂತನೆಯ ಇಚ್ಛಾಶಕ್ತಿಯ ಸಾತ್ ನಿಂದ ಎಂಟು ಜನ ಭಂಗಿ ಬಂಧುಗಳಿಗೆ ನೌಕರಿ ದೊರೆತು, ಅನ್ನಕ್ಕೆ ದಾರಿಯಾಗಿದೆ. ಆದರೆ ಮ್ಯಾನ್ ಹೋಲ್ ಗಳಲ್ಲಿ ಬಿದ್ದು , ಪೌರಕಾಮರ್ಿಕರು ಸಾಯುತ್ತಲೇ ಇದ್ದಾರೆ. ಕೆಲವು ಜೀವಗಳನ್ನೇ ಕಳೆದುಕೊಂಡ ಕೆಜಿಎಪ್ ನ ಕುಟುಂಬಗಳು ಅನಾಥವಾಗಿ, ಹೊತ್ತಿನ ಗಂಜಿಗೂ ಪರದಾಡುತ್ತಿವೆ.

ಭೋಜ, ನಾಯಕನೂರು, ಹಾಳಕೇರಿ ಯಂಥ ಊರುಗಳು ಮಾತ್ರ ಅಸಮಾನತೆಯ ದಳ್ಳುರಿಯಲ್ಲಿ ಬದುಕನ್ನು ಸುಟ್ಟುಕೊಳ್ಳುತ್ತಿಲ್ಲ. ಒಂದೇ ಬಿಕ್ಕಿನ ಹಲವು ಮರುದನಿಗಳು ಯಾವುದೇ ಊರಿಗೆ ಹೋದರೂ ಕೇಳಿಸುತ್ತವೆ, ಕರುಣೆ ಇರುವ ಮನಸ್ಸುಗಳಿಗೆ ಮಾತ್ರ. ಶೋಷಣೆಯ ಮುಖಗಳನ್ನು ಹೇಗೆ ವಿಭಾಗಿಸುವುದು? ಆಥರ್ಿಕ, ಸಾಮಾಜಿಕ, ಸಾಂಸ್ಕೃತಿಕ.. ನಮ್ಮ ವಿಂಗಡಣೆಗಳನ್ನು ಅಣಕಿಸುವಂತೆ ಕಾಲ ಮುನ್ನಡೆಯುತ್ತಿದೆ. ಕೇರಿಯೊಂದಿಗಿನ ಊರಿನ ಅಸಹನೆಯನ್ನು ತಾಳಿಕೊಳ್ಳುವ ದಲಿತ ಲೋಕದ ಚೈತನ್ಯವನ್ನು ಹೊಗಳುವದೊ? ಕಂಬಾಲಪಲ್ಲಿಯಲ್ಲಿಯೇ ಅಪರಾಧಿಗಳು ಬಿಡುಗಡೆಯಾಗಿರುವಾಗ ಬಹಿಷ್ಕಾರ ಹಾಕಿದವರಿಗಾಗಿಯಗಲೀ , ಕೇರಿಯ ಮೇಲೆ ದೊಡ್ಡ ದೊಡ್ಡ ಕಲ್ಲು ತೂರಿದವರಿಗಾಗಲಿ ಶಿಕ್ಷೆ ಹೇಗೆ ನಿರೀಕ್ಷಿಸಬಹುದು? ಒಂದು ಹಂತಕ್ಕೆ ಕೇರಿಯ ಜೀವಗಳಿಗೆ ಮನೆ ಕೊಡಬಹುದು, ಭೂಮಿ ಕೊಡಬಹುದು, ಆದರೆ ಅಂದು ರಾತ್ರಿ ಮನೆಯ ಮೇಲೆ ಕಲ್ಲುಗಳು ಬಿದ್ದಾಗ ಅನುಭವಿಸಿದ ತಲ್ಲಣಗಳಿಗೆ, ಬಿದ್ದ ಹೊಡೆತಕ್ಕೆ , ಶತಶತಮಾನದಿಂದಲೂ ಅನುಭವಿಸುತ್ತಲೇ ಬಂದು ಮನಸ್ಸಿನೊಳಗೆ ಉಂಟಾಗಿರುವ ಮಾಯದ ಗಾಯಗಳಿಗೆ ಮುಲಾಮು ಯಾರು, ಹೇಗೆ ಕೊಡಲು ಸಾಧ್ಯ?

ವೀರಣ್ಣ ಮಡಿವಾಳರ










ಬುಧವಾರ, ಡಿಸೆಂಬರ್ 28, 2011

ದ್ವಿಪದಿ


ಬಣ್ಣದ ಕವಿತೆ ಬರೆಯಲು ಹೋದೆ ಕೆಂಪಾಯಿತು
ಭಾರದ ಕವಿತೆ ಬರೆಯದೆ ಉಳಿದರೂ ಹಸಿರಾಗಲಿಲ್ಲ

ಯಾರು ಊರಿದ ಬೀಜವೋ ಈ ಮರದ ತುಂಬ ಬರೀ ಹಣ್ಣು
ತಿನ್ನಲಾಗದು ಗಾಯ ಮಾಡಿದವರ ಹೆಸರು ಹೇಳುವಂತಿಲ್ಲ ಬಾಯೆಲ್ಲ ಹುಣ್ಣು

ಹೇಳಬೇಡವೇ ಮುದ್ದು ಸುರಿಸಿದ ಕಣ್ಣೀರಿನ ಲೆಕ್ಕ ಯಾರಿಗೂ
ಮಾಡದ ಸಾಲ ತೀರೋವರೆಗೂ ಹೆಣಗಲೇಬೇಕು ನಾಡ ಪ್ರಭುವಾಜ್ಞೆ ಸುಮ್ಮನೆ ಅಲ್ಲ

ಬಂದೆಯಾ ಬಾ ಮಲಗಲು ಇಲ್ಲಿ ಕಂಬಳಿಯಿಲ್ಲ ಏನು ಮಾಡೋದು
ಬೀದಿಯ ಹಾಳು ಮಣ್ಣಾದರೂ ಆದೀತು ಹೊಟ್ಟೆಗೆ ಹಳಸಲಿಗೂ ಗತಿಯಿಲ್ಲ

ಕೇವಲ ಮನುಷ್ಯರು

ಕೊಂಡದ ಮೇಲಿನ ನಡಿಗೆ ಕೆಂಡಕ್ಕೆ ರೇಸಿಗೆ ಹುಟ್ಟುವ ಹಾಗೆ


ಕಾಲನ ಕಾಲಿಗೆ ಹಸಿಗಾಯ

ಜಗತ್ತು ಕಾಲದ ಜೊತೆ ಪೈಪೋಟಿಗೆ ಬಿದ್ದು ಆಧುನಿಕತೆ ಅಭಿವೃಧ್ಧಿ ತಂತ್ರಜ್ಞಾನವೆಂದು ಬೊಬ್ಬೆಹೊಡೆದು ನಾಗಾಲೋಟದಲ್ಲಿ ಓಡುತ್ತಿದ್ದರೆ ಮತ್ತೊಂದು ಕಡೆ ಇದೇ ಕಾಲ ಕತ್ತು ತಿರುಗಿಸದೆ ಕಾಲು ಮುರಿದುಕೊಂಡು ಬಿದ್ದಿದೆ. ಚಲಿಸುವುದಂತೂ ದೂರದ ಮಾತು. ಪ್ರತಿ ಹೆಜ್ಜೆಗೂ ಜಾಲಿಮುಳ್ಳು, ಶತಶತಮಾನದಿಂದಲೂ ಮಾಯದ ಹಸಿಗಾಯಗಳು ದೊಡ್ಡದಾಗುತ್ತಲೇ ಇವೆ.

ಸವಣೂರಿನ ಮಾಂಸದ ಮಾರುಕಟ್ಟೆಯ ಒಂದು ಮೂಲೆಯಲ್ಲಿ ನಾಗರಿಕ ಸಮಾಜದಿಂದ ದೂರವೆ ಉಳಿದಂತಿರುವ ಹದಿನೇಳು ಕುಟುಂಬಗಳು ಮಾತ್ರ ನವಾಬರು ಕೊಟ್ಟ ಕೊಟ್ಟಿಗೆಗಳಂಥ ಜೀವಂತ ನರಕದಲ್ಲಿ ಬೀಡುಬಿಟ್ಟು ನರಳಾಟವನ್ನೆ ಬದುಕಾಗಿಸಿಕೊಂಡು ರೋಗಗಳನ್ನು ತಮ್ಮ ಒಡಹುಟ್ಟಿದವರಂತೆ ಭಾವಿಸಿ ಸಾವುಗಳೆಲ್ಲ ಸಹಜವೆಂದುಕೊಳ್ಳುತ್ತಲೇ ಪಾಪಕೂಪದಲ್ಲಿದ್ದರೂ ಹುಸಿಮುಗುಳು ತುಟಿಯ ಮೇಲೆ ಭಾರವಾಗಿ ಹೊತ್ತು ತಲೆತಲಾಂತರದಿಂದ ಊರಮಂದಿಯ ಮಲ ಹೊರುತ್ತಾ ಬದುಕು ದೂಡುತ್ತಿವೆಯೆಂದರೆ.... ಅಂತಃಕರಣ ಮನುಷ್ಯತ್ವ ಪದಗಳು ನಾಚಿಕೆಪಡುತ್ತವೆ.

ಬೀದಿಯಲ್ಲಿ ನಿಂತು ನೋಡಿದರೆ ಒಂದರಮೇಲೊಂದು ವಾಲಿಕೊಂಡು ನಾಗರಿಕ ಸಮಾಜವನ್ನು ಅಣಕಿಸುವಂತೆ ತೋರುವ ಐದು ಜೋಪಡಿಗಳು. ಅಲ್ಲಲ್ಲಿ ಚೆಲ್ಲಾಪಿಲ್ಲಿ ಬಿದ್ದಿರುವ ಚಿತ್ರಗಳಂತಹ ಅಮಾಯಕ ಜೀವಗಳು ತುಟಿಕಚ್ಚಿ ಬಿಕ್ಕುತ್ತಾ ಭೇಟಿಗೆ ಬಂದವರನ್ನು ಭಾಗ್ಯದೆವತೆಗಳೆಂದೇ ಭಾವಿಸಿ ನಿರೀಕ್ಷೆಯ ಕಂಗಳಿಂದ ಎವೆಯಿಕ್ಕದೆ ನೊಡುತ್ತವೆ. ಹೊರಬಾಗಿಲಲ್ಲೆ ಒಲೆಹೂಡಿದ್ದರೆ, ಒಳಗಿಣಿಕಿದಾಗ ಕಾಲುಚಾಚಿ ಮಲಗಲೂ ಸಾಧ್ಯವಿಲ್ಲದ ನಾಲ್ಕುಮೊಳ ಪಡಸಾಲೆಯಲ್ಲಿ ಮೂರು ನಾಲ್ಕು ಕುಟುಂಬಗಳ ನಿತ್ಯ ಜೀವನ ಜಾಥಾ. ಜೋಳಿಗೆಯಲ್ಲಿ ಕಿರುಚಿತ್ತಿರುವ ಹಸುಗೂಸು, ಚಾಪೆಯಲ್ಲಿ ತಾಯಂದಿರ ನಿಟ್ಟುಸಿರು, ಚಿಕ್ಕಮಕ್ಕಳ ಏದುಸಿರಿನ ಕರಾಳ ವಾಸ್ತವ ಜೀವಅಲುಗಾಡಿಸುತ್ತವೆ. ಈ ಅಮಾನುಷ ಬದುಕಿಗೆ ಶತಮಾನದ ಆಯಸ್ಸೆಂದರೆ.... ರಾಜ್ಯ, ದೇಶ, ಪ್ರಜಾಪ್ರಭುತ್ವ, ಸಂವಿಧಾನ, ನ್ಯಾಯ ಮುಂತಾದ ಪದಗಳನ್ನು ಗಾಳಿಗೆ ತೂರುವುದೆ ಲೇಸು.

ಕಿಡಿಯಾಗಿ ಉದುರುತಿವೆ ಕೆಂಡದಾ ಮೋಡ

"ನಾನು ಕೃಷ್ಣ ಓಬಳೇಶ ಭಂಗಿ, ನವಾಬರ ಕಾಲದಗಿನಿಂದ ಮಲ ಹೊತ್ತು ಜೀವನ ಮಾಡ್ತಾ ಬಂದೀವ್ರಿ. ನಮ್ಮಜ್ಜಗ ಈ ಮನೆಗಳ್ನ ನವಾಬ್ರು ಕೊಟ್ಟಿದ್ರಂತ್ರಿ, ಆವಾಗ ಓರ ಹೊರಗ ದೂರಿದ್ವಂತ್ರಿ, ಈಗ ಪ್ಯಾಟಿ ಬೆಳದು ಊರ ಒಲಗ ಸೇರೆವ್ರಿ. ನನು ಚಿಕ್ಕವನಿದ್ದಾಗ ನಮ್ಮಪ್ಪನ ಜೊತೆ ಪಯಿಖಾನೆ ತೊಳೆಯಾಕ ಹೊಕ್ಕಿದ್ನಿರಿ, ಬ್ಯಾರೆ ದಂಧೆ ಯಾವೂ ಸಿಗಲರದ್ದಕ್ಕ ನಾನೂ ಅದನ್ನ ಮುಂದುವರೆಸಿದ್ನಿರಿ, ಊರಾಗ ಹೋದ್ರ ಕತ್ತೆ ಹಂದಿತರ ನೋಡ್ತಾರ್ರಿ, ಇನ್ನು ನಮಗ್ಯಾರು ಕೆಲಸ ಕೊಡ್ತಾರ್ರಿ, ಕೆಲಸ ಭಾಳ ಆತಂದ್ರ ಸಾಲಿಗ್ಹೋಗೊ ಮಗನನ್ನು ದಂಧೇಕ ಕರಕೊಂಡು ಹೋಗಬೇಕಾಕೈತ್ರಿ. ಜಡ್ಡು ಜಾಪತ್ರಿ ಎಲ್ಲಾ ನಮಗ ಮಾಮೂಲಿರಿ. ನಮಗ ಒಂದು ನೋಕ್ರಿ ಕೊಡ್ರಿ ಅಂತ ಅಲದು ಅಲದು ಸಾಕಾತ್ರಿ. ಇಷ್ಟೊಂದು ಮಂದಿ ಅದೀವ್ರಿ, ಐದಾರು ಮಂದಿಗೆ ಮಾತ್ರ ವೋಟಿಂಗ್ ಕಾಡರ್ು ಅದಾವ್ರಿ, ಎರಡು ರೇಷನ್ ಕಾಡರ್ು, ಮನೀನ ಕೊಟ್ಟಿಲ್ಲಾಂದ್ರ ಇನ್ನು ಬ್ಯಾರೆ ಏನು ಕೇಳಬೇಕ್ರಿ,ಹೆಂಗೋ ಬದುಕು

ದೂಡಿಕೊಂಡು ಹೊಂಟಿದ್ವಿರಿ, ಯಾವಾಗ ಪುರಸಭೆನೋರು ಮನಿ ಖಾಲಿ ಮಾಡ್ರಿ ಇಲ್ಲಿ ಕಾಂಪ್ಲೆಕ್ಸಕಟ್ಟತೀವಿ ಅಂದ್ರೋ, ನಮ್ಮ ಜೀವಾನಾ ಹೋದಂಗಾತ್ರಿ ಏನು ಮಾಡಬೇಕೊ ತಿಳಿಲಿಲ್ರಿ. ಎಲ್ಲಾ ಆಫಿಸ ಕಛೇರಿ ,ದೊಡ್ಡೋರು ಏಲ್ಲರಿಗೂ ಕೈಕಾಲೂ ಬಿದ್ದವಿರಿ, ಯಾರೂ ಕಿವಿಗೊಡಲಿಲ್ಲ. ನಮ್ಮ ಹೆಂಡ್ರು ಮಕ್ಳು ನರಳಾಟ ನೋಡಿ ಸಾಯಬೇಕು ಅನ್ನೀಸತಿತ್ರಿ. ಕೊನೆಗೆ ನಾನೋಬ್ಬನೆ ಸತ್ರೆ ಇವರಿಗೆಲ್ಲ ಯಾರು ದಿಕ್ಕು, ಏನೂ ಉಪಯೋಗ ಆಗಂಗಿಲ್ಲಾ, ಏನಾರ ಮಾಡಿ ಜನರಿಗೆ,ಸಕರ್ಾರಕ್ಕೆ ನಮ್ಮ ಸಂಕಟ ತೋಡಿಕೋಬೇಕು ಅವರು ಕಣ್ಣು ಬಿಟ್ರ ನಮ್ಮ ಮಕ್ಕಳ ಬಾಳೆವಾದ್ರು ಚಂದ ಆಕೈತಿ ಅಂತ ಯೋಚನೆ ಮಾಡಿ ಕೊನೆಗೆ ಯಾವೂದು ದಾರಿ ಕಾಣದ ಕಚೇರಿ ಮುಂದ ಹೋಗಿ ಮಲದ ಅಭಿಷೇಕ ಮಾಡಿಕೊಂಡಿವ್ರಿ.""

ಕಂಬನಿಯ ಬೊಂಬೆಮುರಿದು ಬಿದ್ದ ಸದ್ದು

"ನಾನು ನಾಗಮ್ಮ ಭಂಗಿರಿ ಯಪ್ಪ, ನಮಗ ಈ ಮನೀನ ನವಾಬ್ರು ಕೊಟ್ಟಾರ್ರಿ ಆದ್ರ ಆವಾಗೆಲ್ಲಾ ದಾಖಲೆ ಅದೂ ಇದೂ ಇರಲಿಲ್ಲ. ನಮ್ಮ ಹಿರೇರು ಇದು ನಮ್ದ ಮನಿ ಅಂತ ಹೇಳಿ ಹರೇದಾಗ ರೋಗಹತ್ತಿ ಸತ್ತು ಹೋದ್ರು, ಪುರಸಭೆನೋರು ಇದು ಸಕರ್ಾರದ್ದು ಖಾಲಿ ಮಾಡ್ರಿ ಅಂದ್ರುರಿ.

ಹಂಗಾರ ನೀವು ದಾಖಲೆ ಕೊಡ್ರಿ ಅಂದ್ರ, ಕಚೇರಿಗೆ ಬೆಂಕಿ ಬಿದ್ದಾಗ ಏಲ್ಲಾ ಸುಟ್ಟು ಹೊಗ್ಯಾವು ಅಂತಾರ್ರಿ. ಈಗೀಗಂತು ಪಡಬಾರದ ಕಷ್ಪ ಪಡಾಕಹತ್ತೆವ್ರಿ. ನಮ್ಮ ಮನಿಮುಂದ ಅಲ್ಲಿ ಬಾರ್ ಕಾಣಸತೈತಲ್ರಿ ಅಲ್ಲಿಂದ ರಾತ್ರಿ ಕುಡದು ಬಾಟಲಿ, ಕಲ್ಲು ವಗಿತಾರ್ರಿ, ಈ ಮಾಂಸದ ಮಾಕರ್ೆಟನಾಗಿನ ಉಳಿದ ಹೊಲಸ ತಂದ ಮನಿ ಬಾಗಿಲದಾಗ ಸುರವತಾರ್ರಿ, ಹೊರಗ ಬಂದು ನಿಲ್ಲಾಂಗಿಲ್ರಿ, ಬಾಯಿಗೆಬಂದಂಗ ಬೈತಾರ್ರಿ, ನಾವು ಹೆಣ್ಮಕ್ಳು ಬಹಿದರ್ೆಸೆಗೆ ಬೇಲಿಯೊಳಗ ಹೊಕ್ಕಿದ್ವಿರಿ, ಅಲ್ಲೂ ಕಲ್ಲು ಒಗೆಯೋರ್ರಿ, ಹಿಂಗಾದ್ರ ನಾವು ಹೆಂಗ ಬದುಕೋಣ್ರಿ, ಈ ಅಂಜಲಿ ಮೊನ್ನೆ ಹಡೆದಾಳ್ರಿ, ತಗಡೆಲ್ಲಾ ಸೋರತವ್ರಿ, ರಾತ್ರಿ ಆಗಿತ್ರಿ, ಚರಂಡಿ ನೀರೆಲ್ಲಾ ಮನಿಒಳಗ ಬಂತ್ರಿ, ಹಸಗೂಸನ್ನು ಜೋಳಗ್ಯಾಗ ಹಾಕಿ, ಬಾಣಂತಿನ ಕುಚರ್ಿ ಮ್ಯಾಲ ಕುಂದರಸಿ, ನಾವೆಲ್ಲ ಪಾತ್ರೆ ಪಗಡ ತೊಗುಂಡು ನೀರು ಹೊರಗ ಚೆಲ್ಲಾಕ್ಕತ್ತಿದ್ವಿರಿ, ಎಷ್ಟೋ ವರ್ಷದಿಂದ ಇದ ನಮ್ಮ ಬದುಕಾಗೆತ್ರಿ..... ಆದ್ರ ಹಿಂಗ ಬದುಕಾಕು ನಮ್ಮನ್ನ ಬಿಡುವಲ್ರರಿ. ನಮ್ಮ ಜೀವ ಬದುಕೊ ಜಾಗ ಎಲ್ಲೈತ್ರಿ ಯಪ್ಪಾ ನೀವ ತೋರಸಿ'

ಬಡಪಾಯಿ ಕಣ್ಣೀರು ತುಂಬಾ ಸೋವಿ


'' ನನ್ನ ಹೆಸರು ಮಂಜುನಾಥ ಬಾಬು ಭಂಗಿರಿ. ಈಗೀಗ ನಮ್ಮ ಹೊಟ್ಟೆಗೂ ಕಲ್ಲು ಬಿದ್ದೈತ್ರಿ. ಮಲ ಬಳ್ಯಾಕ ಹೋದ್ರ ಲಾಟಿಲೆ ಹೊಡಿತಾರ್ರಿ, ಬೈತಾರಿ, ಯಾಕ್ರಿ ಅಂತ ಕೇಳಿದ್ರ ಇದನೆಲ್ಲ ಮಾಡಬಾರದು ಅಂತಾರ್ರಿ, ಎಷ್ಟೋ ವರ್ಷದಿಂದ ಇದನ್ನ ಮಾಡಿಕೊಂತ ದಿನಾ ಅರವತ್ತು ಎಪ್ಪತ್ತು ರೂ ದುಡಕೋಂಡ ಬಂದು ಹೆಂಗೊ ಬದಕ್ತಿದ್ವಿರಿ. ನಾವು ಮಾಡೊ ಧಂದೆ ತಪ್ಪು ಅಂತಾ ನಮಗೆಂದು ಅನಿಸಿಲ್ರಿ. ಹೇಸಿಗೆ ಮೈಮೇಲೆ ಸುರಿವಿಕೊಳ್ಳಾಕ ಮನಸ್ಸು ಹೆಂಗ ಬಂತು ಅಂತಾ ಕೇಳ್ತಾರಿ. ನಾವು ದಿನಾ ಅದನ್ನ ಮಾಡ್ತೀವ್ರಿ, ತಲೆಗೆ ಮೈಗೆ ಹತ್ತಲಾರದ ಹೆಂಗ ಕೆಲಸ ಮಾಡಬೇಕ್ರಿ, ಎಲ್ಲರೂ ನೋಡ್ಯಾರಿ, ಈ ಸಲ ಕಛೇರಿ ಮುಂದ ಬಂದು ನಾವು ಹಾಕೆಂಡೆವಿ ಅಷ್ಟರಿ. ಇದರಾಗೇನು ಹೊಸದಿಲ್ರಿ, ಈ ಧಂದೆ ಮಾಡಬೇಕಂದ್ರ ಕುಡಿಬೇಕ್ರಿ, ಮೊದಲ ಚಲೋದೇನು ತಿನ್ನಂಗಿಲ್ರಿ, ಮ್ಯಾಲೆ ಕುಡಿತಾ ಹಿಂಗಾದರ ಜೀವ ಎಲ್ಲಿ ಉಳಿತೈತ್ರಿ, ಎಷ್ಟೊ ಜನ ನಮ್ಮೋರು ಸತ್ತ ಹೋಗ್ಯಾರಿ. ಆದರ ನಮ್ಮ ಹೆಂಡ್ರು ಮಕ್ಕಳು ಮರೀನಾದರೂ ಈ ಭಂಡ ಬದುಕು ಬದಕೋದು ಬ್ಯಾಡ್ರಿ, ಅವರಾದ್ರು ಮನುಷ್ಯಾರಂಗ ಬದಕಬೇಕು ಅನ್ನೋದು ಒಂದ ಆಸೆರಿ''

ಎಳೆಯ ಹೂಗಳ ಅಳುದನಿ

'' ನಾನು ಸಾಲಿಗೆ ಹೊಕ್ಕೆನ್ರಿ, ಓದಾಕ ಬರಿಯಾಕ ಕಲಿಯಾಕತ್ತೆನ್ರಿ'' ಎಂದು ತೊದಲು ತೊದಲಾಗಿ ಮಾತನಾಡುವ ಅನನ್ಯ, ಸೌಮ್ಯ, ಪ್ರಿಯಾಂಕರ ಮನಸ್ಸಿನೊಳಗಿನ ದುಗುಡ ಮಾತ್ರ ತೋರಿಸಲಾಗದ್ದು, ಕೆದರಿದ ಕೂದಲು, ಹರಿದ ಬಟ್ಟೆ ಅರ್ದಂಬರ್ದ ತೊಟ್ಟ ಮಕ್ಕಳ ಮುಖದಲ್ಲಿ ಮಾತ್ರ ಈ ದಾರಿದ್ರ್ಯವನ್ನೆಲ್ಲ ಮೀರಿದ ಕಳೆ. ಆದರೆ ಅದರ ಆಯಸ್ಸು ಎಷ್ಟು ? ಒಂದು ವರ್ಷದ ಎರಡು ವರ್ಷದ ಚಿಕ್ಕ ಮಕ್ಕಳ ರೋಧನ ಹೇಳತೀರದ್ದು, ಹೇಳಲಾಗದ್ದು. ಸುಮ್ಮನೆ ಕಿರುಚುತ್ತವೆ ಹಾಲುಣಿಸುವ ತಾಯಂದಿರು ಕಾಯಿಲೆ ಬಿದ್ದಿರುವ ಚಿತ್ರ ಮನಕಲಕುತ್ತದೆ.

ಕಣ್ಣೀರು ಅಳುತ್ತಿದೆ ಕಣ್ಣಿನ ಕಷ್ಠಕ್ಕೆ

ಈ ಶತಶತಮಾನದ ಯಾತನೆಗೆ ಸಂಹಾರವೆಲ್ಲಿದೆ ಹೇಳಿ. ಭೋಗ ಜಗತ್ತಿನ ವಾರಸುದಾರರಿಗೆ ಸಮಾಜದ ಕಟ್ಟಕಡೆಯವರ ಅತ್ಯಂತಿಕ ಸ್ಥಿತಿ ಅರ್ಥಮಾಡಿಕೋಳ್ಳಲು ಪುರುಸೊತ್ತಿಲ್ಲ. ಬವಣಿತರಿಗೆ ಕನಿಷ್ಠ ಈ ದೇಶದ ಪ್ರಜೆಗಳು ಎನ್ನುವ ಅನುಭವ ಕೊಡಲಾರದ ಸ್ಥಿತಿಯಲ್ಲಿ ನಾವಿದ್ದೇವೆ. ಪರಂಪರೆಯ ಪಿಡುಗುಗಳು ಮುನ್ನಡೆಯಲ್ಲಿರುವ ಈ ಕಾಲದಲ್ಲಿ ಮಾಧ್ಯಾಮ ಅತ್ಯಾಧುನಿಕ ಶಯನಗೃಹಗಳ ಸೌಂದರ್ಯ ವರ್ದನೆಯ ಕುರಿತು ತರ್ಕ ಮಾಡುತ್ತಿರುವ ದುರಂತವಿದು. ಲೋಕ ಐಭೋಗ ಪ್ರಧಾನತೆಯ ಲೋಲುಪ್ತತೆಯಲ್ಲಿ ತೇಲುತ್ತಿರುವಾಗ ತನ್ನೊಳಗೆ ಹುಟ್ಟಿರುವ ಈ ರೀತಿಯ ಅಸಹನೀಯ ಕ್ರೌರ್ಯದ ಬೀಜಗಳು ಅಲ್ಲಲ್ಲಿ ಬೆಳೆಯುತ್ತಲೆ ಇವೆ. ಯಾರೂ ಗುರುತಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳದಿದ್ದಾಗಲೂ ಕೃಷ್ಣ, ಮಂಜುನಾಥರಂಥ ಬರ್ಬರ ಚಿತ್ರಗಳು ತಮ್ಮೊಡಲ ದಾವಾನಿಲವನ್ನು ಸಹಜವಾಗಿಯೆ ಆಸ್ಪೋಟಿಸುತ್ತವೆ. ಕೋಟ್ಯಾನುಕೋಟಿ ಬಜೆಟ್ಟು, ವಹಿವಾಟು, ಖಚರ್ಿನ ಬಗ್ಗೆ ಲೆಕ್ಕಹೊಂದಿಸುವ ತರಾತುರಿಯಲ್ಲಿರುವಾಗ ಸ್ವಾತಂತ್ಯ್ರಾನಂತರದ ಎಷ್ಠೋ ವರುಷಗಳುರುಳಿದರೂ ಪ್ರವಾಹದಂತೆ ಹರಿದ ಹಣ ಎಲ್ಲಿ ಹೋಯಿತು? ಅಂತಃಸ್ಸಾಕ್ಷಿಯ ಪ್ರಶ್ನೆಯಿದು. ಸಾಮಾಜಿಕ ನ್ಯಾಯವೆಂಬ ಪದ ಅಸ್ತಿತ್ವದಲ್ಲಿದೆಯೆ? ಎದೆಮುಟ್ಟಿಕೊಂಡು ಸಾಕ್ಷೀಕರಿಸಬೇಕಿದೆ. ವಚನ ಬಂಡಾಯ ಸಂಧರ್ಭದ ಧೂರ್ತತೆಗಿಂತಲೂ ವರ್ತಮಾನ ಕನರ್ಾಟಕದ ಸಾಮಾಜಿಕ ಅಮಾನುಷತೆ ಎಷ್ಟೋ ಪಾಲು ದೊಡ್ಡದು. ಸಹಜೀವಿಯೊಬ್ಬ ಒಡಲುರಿಯಲ್ಲಿ ಬೇಯುತ್ತಿರುವಾಗ, ತಂಗಾಳಿಯನ್ನು ಒಳಕೋಣೆಯಲ್ಲಿ ಕಟ್ಟಿ ಹಾಕಿ ನೆಮ್ಮದಿಯ ನಿದ್ರೆಗೆ ತಹತಹಿಸುವವರಿಗೆ ಹಸಿವಿನ ಬೇಗುದಿಯ ಅನುಭವ ಅರ್ಥ ಮಾಡಿಸುವುದು ಹೇಗೆ? ಸುತ್ತಲೂ ಹೆಡೆಯತ್ತಿದ ಮೂಢ ನಾಗರಗಳಡಿ ನಿತ್ಯ ಪವಡಿಸುವ ಸವಣೂರಿನ ಭಂಗಿ ಸಮುದಾಯ ಇನ್ನು ಕಗ್ಗತ್ತಲಲ್ಲೆ ಇದ್ದು ಬೆಳಕಿನ ಧ್ಯಾನದಲ್ಲಿರುವ ಎಷ್ಟೋ ಬವಣಿತರ ಆಸ್ಮಿತೆ ಉಳಿಸುವುದು ಹೇಗೆ? ಉದಯರವಿಯ ಉರಿಪಾದದ ಕೆಳಗೆ ಬಕಬರಲೆ ಬಿದ್ದಿರುವ ವಸಂತನನ್ನು ಎತ್ತುವವರಾರು?

ಕಾವ್ಯ ಅನುರಣನ

ಸವಾಲು


ಎದೆ ಕಣ್ಣಹನಿ ತುಂಬಿದ ಕೊಡ
ಈ ಹೊತ್ತು
ನಂಬಿಕೆಯ ಜಗತ್ತನ್ನು ಅನುಮಾನಿಸುವ ಸಮಯ

ಗಿಡುಗನ ಸುಳಿವು ಕಂಡರೂ ಹಕ್ಕಿ
ಗೂಡ ಜತನದಿಂದ ಹೊರಬರಲೇಬೇಕು
ಮರಿಗಳ ಹಸಿವ ನೀಗುವ ಸವಾಲಿದೆ

ಹೊಂಚು ಹಾಕಿದ ಬೆಕ್ಕ ಸುಯಿತವ ಧಿಕ್ಕರಿಸಿ
ಕಪ್ಪು ಇಲಿ ಕಾಳು ಕಡಿ ಕದಿಯಬೇಕಿದೆ
ಗುದ್ದಿನ ಕಾವು ಮೈಸುಡುತ್ತದೆ

ನಗುವ ಚಿಗುರೆಲೆಯ ಕೊಂಬೆಯಲಿ ಹಾವು
ನಿಡುಸುಯ್ಯುತಿದೆ
ತರಗೆಲೆಯ ಮೈ ಸವರಲು ಕೈಚಾಚಿದೆ
ಕಾಲಕೆಳಗೆ ಹಳದಿ ಎಲೆಗಳ ಹೆಣದ ಮಿಸುಕು
ಎತ್ತಿಕೊಂಡಾಗ
ಕಣ್ಣು ತಾನೇ ಹನಿಸಿದ ಹೊತ್ತಲ್ಲಿ
ಗಾಳಿಧೂಳ ಹೊತ್ತು ತಂದು ರಾಚಿತು ಮೈಯೆಲ್ಲ ಕೆಂಧೂಳು
ಕರಿಗಲ್ಲದ ತುಂಬ ಮುತ್ತಿನ ಸಾಲು
ಬಿರುಬಿಸಿಲಲ್ಲೂ ಗಿಡ ಹನಿಯುದುರಿಸಿತು ಇಬ್ಬನಿಯನಲ್ಲ.

[ವೀರಣ್ಣ ಮಡಿವಾಳರ ನಮ್ಮ ನಡುವಿನ ಸಶಕ್ತ ಯುವ ಕವಿಗಳಲ್ಲಿ ಒಬ್ಬರು. ತಮ್ಮ ಪ್ರಥಮ ಕವನ ಸಂಕಲನ 'ನೆಲದ ಕರುಣೆಯ ದನಿ' ಯ ಮೂಲಕ ಕಾವ್ಯ ಜಗತ್ತಿನಲ್ಲಿ ದಿಟ್ಟ ಹೆಜ್ಜೆಯೂರಿರುವವರು. 'ಸವಾಲು' ಆ ಸಂಕಲನದ ಒಂದು ಕವಿತೆ.]

ಜೀವ ಪಣಕ್ಕಿಟ್ಟು ಜೀವನ ಕಟ್ಟುವ ಹಾದಿಯಲ್ಲಿ.....
                                                         
ರೂಪ ಹಾಸನ

ಯಾರೂ ಯಾರನ್ನೂ ನಂಬದಂತಹ, ಅನುಮಾನಗಳೇ ಮುಗ್ಧತೆಯನ್ನು ಸುಡುವ ಅಸ್ತ್ರಗಳಾಗುತ್ತಿರುವ ಈ ಹೊತ್ತಿನಲ್ಲಿ ನೋವು-ಕ್ರೌರ್ಯಗಳು ಅಕ್ಕಪಕ್ಕದ ಮನೆಯಲ್ಲೇ ವಾಸಿಸುವ ಮಿತ್ರರಂತಾಗುತ್ತಿವೆ. ನೋವು ಹೊತ್ತು ತರುವ ಹಿಂಸೆಯನ್ನು ಪ್ರಶ್ನಿಸುವಂತೆಯೂ ಇಲ್ಲ. ಏಕೆಂದರೆ ಅದರ ಆಳ ಬೇರುಗಳೆಡೆಯಲ್ಲಿ ಚಾಚಿಕೊಂಡಿರುವ ವಿಷದ ಬೀಜಗಳು ಮತ್ತೆ ಮತ್ತೆ ಮೊಳೆಯುತ್ತಲೇ ಇರುವ ರಕ್ತ ಬೀಜಾಸುರ ಸಂತತಿಯಂತೆ ಎಲ್ಲೆಡೆಗೆ ಚೆಲ್ಲಾಡಿ ಬಿದ್ದು ಗಹಗಹಿಸಿ ನಗುತ್ತಾ ಬೃಹದಾಕಾರವಾಗಿ ಜೀವರಾಶಿಯನ್ನೇ ನುಂಗುತ್ತಿರುವಾಗ ತಲ್ಲಣಿಸುತ್ತಿರುವ ಜೀವ ಹೊತ್ತು ಕವಿತೆ ಕೇಳುತ್ತಿದೆ 'ದಾರಿಯೆಲ್ಲಿದೆ ಇಲ್ಲಿ ನಿಷ್ಕಲ್ಮಶ ಪ್ರೀತಿಗೆ?' ಎಂದು.

ಈ 'ಸವಾಲು' ಕವಿತೆಯಲ್ಲಿ ನಂಬಿಕೆಯ ಪ್ರಪಂಚವನ್ನೇ ಅನುಮಾನಿಸುತ್ತಿರುವ ಈ ಹೊತ್ತಿನಲ್ಲಿ ಕಣ್ಣ ಹನಿ ತುಂಬಿದ ಕೊಡವಾಗಿರುವ ಎದೆಯ ತಲ್ಲಣದ ಎಳೆ ಎಳೆಗಳು ಬಿಚ್ಚಿಕೊಳ್ಳುತ್ತವೆ. ಆಕಾಶದಲ್ಲಿ ಹೊಂಚುತ್ತಿರುವ ಗಿಡುಗನ ಸುಳಿವು ಸಿಕ್ಕರೂ ಹಕ್ಕಿ, ಗೂಡು ಬಿಟ್ಟು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಾ, ಆತಂಕದಲ್ಲಿ ಹೊರಬರಲೇ ಬೇಕಿರುವ ಅನಿವಾರ್ಯತೆಯನ್ನು ನಮ್ಮೆದುರಿಗೆ ಬಿಚ್ಚಿಡುವ ಕವಿ, ಹಕ್ಕಿಗೆ ಮರಿಗಳ ಹಸಿವು ನೀಗುವ ಸವಾಲಿರುವುದನ್ನು ನೆನಪಿಸಿ, ಪ್ರೀತಿ-ವಾತ್ಸಲ್ಯಗಳ ಮುಂದೆ ಸಾವಿನ ಭೀಕರತೆಯೂ ಕ್ಷುಲ್ಲಕವಾಗುವ ಅಂತಃಕರಣದ ರೂಪಕವನ್ನು ನಮ್ಮೆದುರಿಗೆ ಬಿಚ್ಚಿಡುತ್ತಾರೆ.

ಹೊರಗೆ ಬೆಕ್ಕು ಠಳಾಯಿಸುತ್ತಾ ಇಲಿಗಾಗಿ ಹೊಂಚು ಹಾಕುತ್ತಿದ್ದರೂ ಇಲಿ ಕಾಳು ಕಡಿಯನ್ನು ಕದಿಯಲೇ ಬೇಕಿದೆ. ಅದಕ್ಕೆ ಈ ಜೀವ ವತರ್ುಲದಲ್ಲಿ ತಾನು ಬಿದ್ದಿರುವ ಅರಿವಿಲ್ಲದೆಯೂ, ಬೆಕ್ಕಿನ ಕೈಗೆ ಸಿಕ್ಕಿ ಹಾಕಿಕೊಂಡರೆ ಉಳಿಗಾಲವಿಲ್ಲವೆಂಬ ನಿಜ ಅದಕ್ಕೆ ಗೊತ್ತಿದೆ. ಆದರೆ ಬದುಕಿನ ಸಂಘರ್ಷಗಳು ಎಷ್ಟೇ ದೊಡ್ಡವಾದರೂ ಬದುಕು ಅದಕ್ಕಿಂಥಾ ದೊಡ್ಡದು. ಬದುಕುವುದು ಎಲ್ಲಕ್ಕಿಂಥಾ ಮುಖ್ಯ ಎಂಬ ಅರಿವಿಲ್ಲದೇ ಸಾಗುವ ಪ್ರಕೃತಿ ಸಹಜ ದಾರಿಗೆ, ಎಷ್ಟು ಪೆಟ್ಟುಗಳು ಬಿದ್ದರೂ ಮತ್ತೆ ಚೇತರಿಸಿಕೊಂಡು ಏಳಲೇ ಬೇಕಾದ ಸವಾಲು ಮತ್ತು ಅನಿವಾರ್ಯತೆ.

ಬದುಕು ಮತ್ತು ಅದನ್ನು ಒಳಗೊಳ್ಳುವಾಗ ನಡೆಸುವ ಸಂಘರ್ಷ ಚಿಗುರೆಲೆಯ ಕೊಂಬೆಯಲ್ಲಿ ಹಾವು ನಿಡುಸುಯ್ಯುತ್ತ ಮಲಗಿದಂತೆಂದು ಬೆಚ್ಚಿಬೀಳಿಸುವ ಕವಿ, ಕಾಲಕೆಳಗೆ ಬಿದ್ದಿರುವ ಆ ಮರವುದುರಿಸಿದ ಪಕ್ವಗೊಂಡು ಬಿದ್ದ ಹಳದಿ ಎಲೆಗಳ ಶವದ ಮಿಸುಕಿನಲ್ಲಿ ತರಗೆಲೆಗಳನ್ನು ಪ್ರೀತಿಯಿಂದ ಸವರಲು ಎತ್ತಿಕೊಂಡಾಗ ಕಣ್ಣು ತನ್ನಂತೆ ತಾನೇ ಅದರ ಸಾರ್ಥಕತೆ ನೆನೆದು ಹನಿಗೂಡುತ್ತದೆ. ಸವಾಲಿಗೆ ಎದೆಯೊಡ್ಡಿ ನಿಂತ ಸಂಘರ್ಷ ನೆನಪಿಸುವಂತೆ ಗಾಳಿ ಧೂಳನ್ನು ಹೊತ್ತು ತಂದು ಮೈಯೆಲ್ಲ ಕೆಂಧೂಳು ರಾಚಿದಾಗ, ಆ ಕೆಂಧೂಳು ತೊಳೆಯಲು ತನ್ನದಲ್ಲದ, ಯಕಶ್ಚಿತ್ ತನ್ನ ಮೈಮೇಲಿನ ಇಬ್ಬನಿ ಉದುರಿಸದೇ ಆ ಬಿರು ಬಿಸಿಲಿನಲ್ಲೂ ಆಸರೆಯಾಗಿ ನಿಂತ ಗಿಡ ತನ್ನ ಒಡಲನ್ನೇ ಬಸಿದು ಹನಿಯುದುರಿಸಿದ್ದನ್ನು ಸಾರ್ಥಕತೆಯಿಂದ ಕವಿ ನೆನೆಯುತ್ತಾನೆ.

ಬದುಕಿಗೊಡ್ಡುವ ಸವಾಲುಗಳ ಜೊತೆ ಜೊತೆಗೇ, ಒಳಗಿನಿಂದಲೇ ಹದಗೊಳಲು ಗಟ್ಟಿ ಆಸರೆಗಳೂ ದಾರಿಯುದ್ದಕ್ಕೂ ಇರುತ್ತವೆ. ನೋವು, ಸವಾಲು ಮತ್ತು ಸಂಘರ್ಷಗಳೇ ತುಂಬಿದ ಹಾದಿಯಲ್ಲಿಯೂ, ಪ್ರೀತಿ ಮತ್ತು ಸಹನೆ ತುಂಬಿದ ಕೈಗಳ ಸಾಂತ್ವನ ಇದೆಯೆಂದೇ ಬದುಕು ಸಹ್ಯವಾಗುತ್ತದೆ. ಬದುಕಿನ ಸವಾಲು ಮತ್ತು ಅದನ್ನು ಕಾಯುವ ಜೀವ ಕಾರುಣ್ಯ ಒಟ್ಟೊಟ್ಟಿಗೇ ಸಾಗುವ ಶಕ್ತಿಗಳು. ನುಂಗಿ ನೊಣೆಯಲು ಕಾದು ನಿಂತ ಸಾವಿನ ಸೆರಗಿನಲ್ಲೂ ಕಾಯುವ ಒಂದು ಆಶಾವಾದ ಇರುವೆಡೆಗೆ ನಮ್ಮನ್ನು ಸೆಳೆವ ಕವಿ, ಈ ಸಂಘರ್ಷಮಯ ಬದುಕುವ ಸವಾಲಿಗಿಂತಾ, ಬದುಕುಳಿಯಲೇ ಬೇಕಾದ ಅನಿವಾರ್ಯತೆಯಲ್ಲಿ ಎದುರಾಗುವ ಜೀವ ಪ್ರೀತಿಯ ಹಿರಿಮೆಯನ್ನು ಎತ್ತಿ ಹಿಡಿದು ಆ ಆಶಾವಾದದೆಡೆಗೆ ನಮ್ಮನ್ನು ಕರೆದೊಯ್ಯುತ್ತಾನೆ.

ದ್ವಿಪದಿಗಳು

ಆ ಬಾಡಿದ ಕನಸುಗಳ ನನ್ನ ಕಳ್ಳ ಕಣ್ಣುಗಳಲಿ ಎತ್ತಿಕೊಂಡೆ
ನಿಜ ದಾರಿಹೋಕರು ಮಾಡಿದ ಗಾಯ ಬಲು ಭೀಕರ

ಈ ಜಾವ ಎಳೆ ಮುತ್ತುಗಳು ಅರಳುತ್ತಿವೆ ಕೆಂಪಾಗಿ ಏಕೋ
ಕೂಡಿ ಉಣ್ಣುವ ಕನಸು ಕಾಣದಿದ್ದರೆ ಗಂಟೇನು ಹೋಗುವುದಿತ್ತು

ಬೇಡ ಮಹರಾಯ ಭಿಕಾರಿಗೆ ಬಣ್ಣದ ಷಟರ್ು ಒಪ್ಪುವುದಿಲ್ಲ
ಹೊಟ್ಟೆಗಿಲ್ಲವ್ವ ಬಟ್ಟೆಯ ಮಾತೇಕೆ ಇವಳಿಗೆ ಹೇಳಿ ಪ್ರಯೋಜನವಿಲ್ಲ

ನಿದಿರೆಯಿಲ್ಲದ ಕಣ್ಣು ನಿನ್ನವು ಯಾವಾಗಲೂ ಒರಗಿಕೊಳ್ಳುವ ಕಲ್ಲಿನ ಪ್ರಶ್ನೆ
ಯಾರು ಹೇಳಬೇಕು ಆ ಭಂಡಿಗೆ ಖಾಲಿ ಹೊಟ್ಟೆಯ ಕಣ್ಣು ಹಿಡಿಸುವುದಿಲ್ಲವಂತೆ

ಭಾನುವಾರ, ನವೆಂಬರ್ 13, 2011

ಬಿಡಿ ಬಿಡಿ ಕವಿತೆ

ಹೆದೆಯೇರಿಸಿ
ಹಿಂದಕ್ಕೆಳೆದೇ ಹೊಡೆಯಬೇಕು ಬಾಣ
ಆವಾಗಲೇ ಬೇಟೆ
ಹಸಿದ ಹೊಟ್ಟೆಯ ಸಿಟ್ಟು
ರಟ್ಟೆಗೆ ತಂದುಕೊಂಡು
ಧಾವಿಸಿ ಓಡಿದರೆ ಸಿಕ್ಕುವುದಿಲ್ಲ ರೊಟ್ಟಿ


***


ಧಡಿಯನ ಕಾಲ್ತುಳಿತಕೆ
ಪುಟ್ಟ ಇರುವೆಯ ಹೊಟ್ಟೆ ಒಡೆಯಿತು
ಮುಂದಡಿಯಿಡುವ
ಇಚ್ಛಾಶಕ್ತಿ ಒಡೆಯಲಾಗಲಿಲ್ಲ
        

***
 
ಆ ಜನನಿಬಿಡ ಬೀದಿಯಲ್ಲಿ
ಕಣ್ಣಲ್ಲೇ ಜೀವ ಹಿಡಿದ ಹಸುಳೆ
ಅಲವತ್ತುಕೊಳ್ಳುತ್ತಿದೆ
ತುತ್ತು ಅನ್ನ ನೀಡಿ ನನ್ನ ಬದುಕಿಸಿ
ಬದುಕಿರುವವರ‍್ಯಾರೂ ಕಾಣಿಸುತ್ತಿಲ್ಲ


***


 
ನನ್ನ ಕೆನ್ನೆ
ಮೇಲೊಂದು ಹನಿ ಮೂಡಿದೆ
ಅದು ಅವಳು ಕೊಟ್ಟ ಮುತ್ತು ಎಂದು
ಲೋಕದ ಆಪಾದನೆ
ಯಾರಿಗೇನು ಗೊತ್ತು
ಅದು ಅವಳು ಕೊಡದಿರುವುದಕ್ಕೆ
ಜಾರಿದ ಕಣ್ಣ ಹನಿಯೆಂದು


***


ಭುವಿಯೊಡಲು ಬಿರಿದಿದೆ
ಯಾರದೋ ದಾಳಿಗೆ
ಸದ್ದು ಬೇಡ ಜಗವೇ
ಮಗು ಮಲಗಿದೆ
ನನ್ನವಳ ಒಡಲೊಳಗೆ